ಹೆಚ್ಚುತ್ತಿರುವ ವಾಹನ ಕಳವು ಪ್ರಕರಣ-ನಾಗರಿಕರು ಆತಂಕದಲ್ಲಿ
0
February 28, 2019
ಕುಂಬಳೆ : ಕುಂಬಳೆ ರೈಲು ನಿಲ್ದಾಣ ಬಳಿ ನಿಲ್ಲಿಸಿ ಮಂಗಳೂರಿಗೆ ತೆರಳಿದ ವ್ಯಕ್ತಿಯೊಬ್ಬರ ಮಾರುತಿ ಆಲ್ಟೊ ಕಾರೊಂದನ್ನು ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ.
ಕುಂಬಳೆ ರೈಲು ನಿಲ್ದಾಣ ಬಳಿ ಬುಧವಾರ ಬೆಳಿಗ್ಗೆ ಕಾರ್ ಪಾಕಿರ್ಂಗ್ ಮಾಡಿ ರೈಲು ಮೂಲಕ ಮಂಗಳೂರಿಗೆ ತೆರಳಿದ ಕುಂಬಳೆ ನಾೈಕಾಪು ನಿವಾಸಿ ಸಂದೀಪ್ ಬಲ್ಲಾಳ್ ಎಂಬವರ ಮಾಲಕತ್ವದ ಕೆಎಲ್-14 ಕೆ-4326 ದಾಖಲಾತಿ ಸಂಖ್ಯೆ ಬಿಳಿಬಣ್ಣದ ಮಾರುತಿ ಆಲ್ಟೊ ಕಾರು ಕಳವಿಗೀಡಾದ ಬಗ್ಗೆ ಸಂಜೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾಹಿತಿಗಳ ಪ್ರಕಾರ ಕುಂಬಳೆ ರೈಲು ನಿಲ್ದಾಣ ಬಳಿ ಕಳೆದ ಕೆಲವು ತಿಂಗಳಿನಿಂದ ಅದೆಷ್ಟೋ ದ್ವಿಚಕ್ರ ವಾಹನಗಳು ಮತ್ತು ಕಾರುಗಳು ನಿರಂತರ ಕಳವಾಗಿದ್ದ ಬಗ್ಗೆ ಕುಂಬಳೆ ಠಾಣೆಯಲ್ಲಿ ಅನೇಕ ದೂರು ದಾಖಲಾಗಿದ್ದರೂ ಪೊಲೀಸರು ಇದರ ಬಗ್ಗೆ ಕಾರ್ಯಪ್ರವತ್ತರಾಗದೆ, ತನಿಖೆಯನ್ನೂ ನಡೆಸದೆ ಆರೋಪಿಗಳನ್ನು ಬಂಧಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಕಂಡುಬಂದಿದೆ.
ಕುಂಬಳೆ ರೈಲು ನಿಲ್ದಾಣವನ್ನು ಕೇಂದ್ರವಾಗಿಸಿ ವಾಹನ ದರೋಡೆ ನಡೆಸುವ ವ್ಯವಸ್ಥಿತವಾದ ತಂಡವೊಂದು ಕಾರ್ಯಪ್ರವತ್ತರಾಗಿದ್ದು, ಮಂಗಳೂರು ಉದ್ಯೋಗಿಗಳ ಮತ್ತು ಕಾಲೇಜು ವಿದ್ಯಾರ್ಥಿಗಳ ವಾಹನಗಳನ್ನು ಗುರುತಿಸಿ, ಸಂಚು ರೂಪಿಸಿ ಲಪಟಾಯಿಸುವ ತಂಡಕ್ಕೆ ಕುಂಬಳೆ ರೈಲು ನಿಲ್ದಾಣದಲ್ಲಿ ಸಿ.ಸಿ.ಟಿ.ವಿ ಕ್ಯಾಮರಾ ಇಲ್ಲದಿರುವುದು ವರದಾನವಾಗಿದೆ.
ತಮ್ಮ ದುಡಿಮೆಯ ಅದೆಷ್ಟೋ ಭಾಗಗಳನ್ನು ಕ್ರೋಢೀಕರಿಸಿ ಮತ್ತು ಬ್ಯಾಂಕ್ ಗಳಿಂದ ದೊಡ್ಡ ಮೊತ್ತದ ಸಾಲ ಸೌಲಭ್ಯಗಳನ್ನು ಪಡೆದು ತನ್ನ ದೈನಂದಿನ ಓಡಾಟಕ್ಕೆ ಉಪಯೋಗಿಸುವ ತಮ್ಮ ವಾಹನಗಳನ್ನು ಕಳಕೊಂಡ ವ್ಯಕ್ತಿಗಳ ದುಃಖ ಮತ್ತು ಇನ್ನು ನಮ್ಮ ವಾಹನಗಳನ್ನು ಯಾವಾಗ ಕಳಕೊಳ್ಳುತ್ತೇವೆಯೋ ಎಂಬ ವ್ಯಥೆಯಲ್ಲಿರುವ ಜನರ ಭಾವನೆಗೆ ಬೆಲೆಯನ್ನು ಕಲ್ಪಿಸಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳ ತಂಡವನ್ನು ಶೀಘ್ರ ಬಂಧಿಸಬೇಕಾಗಿ ಪ್ರಯಾಣಿಕರು ಆಗ್ರಹಿಸಿದ್ದಾರೆ.