ತಿರುವನಂತಪುರ:: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿನಿಧಿಸುವ ಧಮ್ರ್ಮಡಂ ಕ್ಷೇತ್ರದಲ್ಲಿ ಶೀಘ್ರವೇ ಗ್ಲೋಬರ್ ಡೇರಿ ವಿಲೇಜ್ ತಲೆ ಎತ್ತಲಿದೆ. ಈ ಯೋಜನೆ ಸಾಕಾರಗೊಳಿಸುವುದಕ್ಕೆ ಬೇಕಾದ ಎಲ್ಲ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಿದ್ದು, ಇದು ಏಕೀಕೃತ ಅಭಿವೃದ್ಧಿ ಯೋಜನೆಯಾಗಿ ಸಾಕಾರಗೊಳ್ಳುತ್ತಿದೆ.
ಕಣ್ಣೂರು ಜಿಲ್ಲೆಯ ದಮ್ರ್ಮಡಂ ಕ್ಷೇತ್ರದ ವೆಂಗಾಡ್ ಗ್ರಾಮಪಂಚಾಯಿತಿಯನ್ನು ಗ್ಲೋಬಲ್ ಡೇರಿ ವಿಲೇಜ್ ಆಗಿ ಪರಿವರ್ತಿಸಲಾಗುತ್ತಿದೆ.ಇದಕ್ಕೆ ಸಂಬಂಧಿಸಿದ ಪ್ರಾಥಮಿಕ ಕಾರ್ಯಗಳೆಲ್ಲ ಸಂಪೂರ್ಣಗೊಂಡಿದೆ ಎಂದು ಪಶುಸಂಗೋಪನಾ ಇಲಾಖೆಯ ರಾಜ್ಯ ಸಚಿವ ಕೆ.ರಾಜು ವಿಧಾನಸಭೆಗೆ ಬುಧವಾರ ಮಾಹಿತಿ ನೀಡಿದರು.
ರಾಜ್ಯಕ್ಕೆ ಅಗತ್ಯದಷ್ಟು ಹಾಲನ್ನು ರಾಜ್ಯದಲ್ಲೇ ಉತ್ಪಾದಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವಪಡೆದುಕೊಂಡಿದೆ. ಈ ಯೋಜನೆ ಪ್ರಕಾರ, ಗ್ರಾಮದಲ್ಲಿ ಡೇರಿ ಘಟಕಗಳು, ಆಹಾರ ಸಂಸ್ಕರಣಾ ಘಟಕಗಳನ್ನು ಹೊಂದುವುದು ಮತ್ತು ದೇಶಿ ಹಸುಗಳ ಸಾಕಣೆ, ಅವುಗಳಿಗೆ ಬೇಕಾದ ಹುಲ್ಲುಗಾವಲು ನಿರ್ಮಾಣ ಎಲ್ಲವೂ ಇದರಲ್ಲಿ ಅಡಕವಾಗಿದೆ.ಒಟ್ಟಿನಲ್ಲಿ ಸದ್ಯ ಹೆಚ್ಚು ಬೇಡಿಕೆ ಇರುವ ದೇಸಿ ಹಸುಗಳ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಜನರಿಗೆ ತಲುಪಿಸುವುದು ಮತ್ತು ಗರಿಷ್ಠ ಮಟ್ಟದಲ್ಲಿ ಅವುಗಳ ಪ್ರಯೋಜನ ಪಡೆಯುವ ಉದ್ದೇಶ ಇದರಲ್ಲಿದೆ.
ಧಮ್ರ್ಮಡಂ ವಿಧಾನ ಸಭಾ ಕ್ಷೇತ್ರವು ಪಿಣರಾಯಿ, ಮುಜಪ್ಪಿಲಂಗಾಡು, ಅಂಜರಕ್ಕಂಡಿ ಮತ್ತು ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳಲ್ಲಿ ಸ್ಯಾಟಲೈಟ್ ಡೇರಿ ಘಟಕಗಳನ್ನು ಸ್ಥಾಪಿಸುವ ಯೋಜನೆಯೂ ಸರ್ಕಾರಕ್ಕೆ ಇದೆ. ಹಾಲು ಉತ್ಪಾದನೆಯ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹಾಲಿನ ಇತರೆ ಉತ್ಪನ್ನಗಳನ್ನು ಉತ್ಪಾದಿಸಿ ಅವುಗಳನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಉದ್ದೇಶವೂ ಇದೆ ಎಂದು ಸಚಿವ ಕೆ.ರಾಜು ಸುದ್ದಿಗಾರರಿಗೆ ತಿಳಿಸಿದ್ದಾರೆ.