ಕಾಸರಗೋಡು: ಲಕ್ಷ ದ್ವೀಪ-ಮಾದೀವ್ಸ್-ಕನ್ಯಾಕುಮಾರಿ ವಲಯದಲ್ಲಿ ತಲೆದೋರಿದ "ಮಹ" ಸುಂಟರಗಾಳಿ, "ಕ್ಯಾರ್" ಸುಂಟರಗಾಳಿಯ ಪರಿಣಾಮ ಈ ಕಳೆಗೆ ತಿಳಿಸಲಾದ ಕಡಲು ಪ್ರದೇಶಗಳಲ್ಲಿ ಬೆಸ್ತರು ಮೀನುಗಾರಿಕೆಗೆ ತೆರಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕೇರಳ ಕರಾವಳಿಯಲ್ಲಿ ತಾಸಿಗೆ 40-50 ಕಿಮೀ ವೇಗದಲ್ಲಿ, ಕೆಲೆವಡೆ 60 ಕಿಮೀ ವೇಗದಲ್ಲಿ ಪ್ರಬಲ ಗಾಳಿ ಬೀಸುವ ಸಾಧ್ಯತೆಗಳಿವೆ. ನ.1ರಿಂದ 4 ವರೆಗೆ ಮಧ್ಯ ಪೂರ್ವ ಅರೆಬಿ ಕಡಲಿನಲ್ಲಿ ತಾಸಿಗೆ 120-170 ಕಿಮೀ ವೇಗದಲ್ಲಿ , ಮಧ್ಯ ಪಶ್ಚಿಮ ಅರೆಬಿ ಸಮುದ್ರದಲ್ಲಿ 40-65 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಗಳಿವೆ. ಮುಂದಿನ 12 ತಾಸುಗಳಲಿ ಕನ್ಯಾಕುಮಾರಿ, ಮಾಲ್ದೀವ್ಸ್ ಭಾಗಗಳಲ್ಲಿ ಮೀನುಗಾರಿಕೆ ಪೂರ್ಣರೂಪದಲ್ಲಿ ನಿಷೇಧಿಸಲಾಗಿದೆ. ಜೊತೆಗೆ ಲಕ್ಷ ದ್ವೀಪ ಪ್ರದೆಶದಲ್ಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ, ಅರೆಬಿ ಸಮುದ್ರದಲ್ಲಿ, ಕೇರಳ-ಕರ್ನಾಟಕ ಕರಾವಳಿಗಳಲ್ಲಿ ಮುಂದಿನ 24 ತಾಸುಗಳ ವರೆಗೆ ಮೀನುಗಾರಿಕೆ ಪೂರ್ಣರೂಪದಲ್ಲಿ ನಿಷೇಧಿಸಲಾಗಿದೆ. ನ.4 ವರೆಗೆ ಮಧ್ಯ ಪೂರ್ವ ಅರೆಬಿ ಕಡಲಲ್ಲಿ ಮೀನುಗಾರಿಕೆಗೆ ತೆರಳಕೂಡದು ಎಂದು ತಿಳಿಸಲಾಗಿದೆ.
ಎತ್ತರದ ತೆರೆಗಳಿಗೆ ಸಾಧ್ಯತೆ:
ನ.1 ರಾತ್ರಿ 11.30 ವರೆಗೆ ಪೊಳಿಯೂರಿನಿಂದ ಕಾಸರಗೋಡು ವರೆಗಿನ ಕಡಲ ತೀರದಲ್ಲಿ ಸಮುದ್ರದಲ್ಲಿ 3.5 ಮೀಟರ್ ನಿಂದ 4.3 ಮೀಟರ್ ವರೆಗಿನ ಎತ್ತರದಲ್ಲಿ ತೆರೆಗಳು ಏಳುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಸಮುದ್ರ ಸ್ಥಿತಿ ಅಧ್ಯಯನ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಕರಾವಳಿ ಪ್ರದೇಶಗಳು ಮತ್ತು ಆಸುಪಾಸಿನ ಕೆಳಸ್ತರದ ಪ್ರದೇಶಗಳು ಜಲಾವೃತವಾಗುವ ಭೀತಿಯಿದೆ. ಕೇಂದ್ರ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯಲ್ಲಿ ಬದಲಾವಣೆ ಬರುವ ವರೆಗೆ ಮೀನುಗಾರರು ಕಡಲಿಗೆ ತೆರಳಕೂಡದು.