ಕಾಸರಗೋಡು: ಕೋವಿಡ್ 19 ಕರೊನಾ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತುರ್ತು ಅಗತ್ಯಗಳೂ ವ್ಯತ್ಯಸ್ತಗೊಂಡು ಜನರು ಗೊಂದಲಕ್ಕೊಳಗಾಗಿದ್ದಾರೆ. ಈ ಮಧ್ಯೆ ಉಂಟಾಗಿರುವ ನಿಬಧಗಳ ಮಧ್ಯೆ ಮರಣಾನಂತರದ ವಿಧಿವಿಧಾನಗಳನ್ನು ಪುರೋಹಿತರು ಸ್ವತಃ ವೀಡಿಯೋ ಕಾಲ್ ಮೂಲಕ ನಿರ್ವಹಿಸಿದ ವಿದ್ಯಮಾನ ವಿದ್ಯಾನಗರದಲ್ಲಿ ನಡೆದಿದೆ.
ವಿದ್ಯಾನಗರ ನೆಲಕ್ಕಳದ ದಿ.ಮರುವಳ ಶಂಕರನಾರಾಯಣ ಭಟ್ ರ ಪತ್ನಿ ವೆಂಕಟೇಶ್ವರಿ ಅಮ್ಮ(89) ಮಾ.25 ರಂದು ನಿಧನರಾಗಿದ್ದರು. ಅಂದು ವಾಹನ ಸಂಚಾರವಿಲ್ಲದೆ ಬಂದ್ ಇದ್ದರೂ ಪುರೋಹಿತರನ್ನು ಭಾರೀ ಉಪಕ್ರಮಗಳ ಮೂಲಕ ಕರೆಸಿ ಅಂತಿಮ ವಿಧಿವಿಧಾನ ನೆರವೇರಿಸಿದ್ದರು. ಬಳಿಕದ ಮೂರನೇ ದಿನದ ಕಾರ್ಯಕ್ರಮಕ್ಕೆ ಪುರೋಹಿತರನ್ನು ಕರೆತರಲು ಸಾಧ್ಯವಾಗಿರಲಿಲ್ಲ. ಬಳಿಕ ಸನ್ನಿವೇಶದ ಮಹತ್ವವನ್ನರಿತು ಬದಿಯಡ್ಕ ಪಂಜರಿಕೆಯ ವೇದಮೂರ್ತಿ ಗಣಪತಿ ಭಟ್ ಅವರು ತಮ್ಮ ಮನೆಯಿಂದಲೇ ವೀಡಿಯೋ ಕಾಲ್ ಮೂಲಕ ಮೂರನೇ ದಿನದ ವಿಧಿವಿಧಾನ(ಬೂದಿ ಮುಚ್ಚುವುದು) ಗಳನ್ನು ಮಾರ್ಗದರ್ಶನ ನೀಡಿದರು. ಒಂದೂವರೆ ಗಂಟೆಗಳ ಕಾಲ ವೀಡಿಯೋ ಕಾಲ್ ಪ್ರಕ್ರಿಯೆ ನಡೆಯಿತು. ದಿ. ವೆಂಕಟೇಶ್ವರಿ ಅಮ್ಮ ಅವರ ಪುತ್ರ ಡಾ. ಉದಯಶಂಕರ ಭಟ್ ಪ್ರಕ್ರಿಯೆ ನಿರ್ವಹಿಸಿದರು. ಮೃತರ ಇಬ್ಬರು ಪುತ್ರಿಯರು ಲಾಕ್ ಡೌನ್ ಕಾರಣ ದಕ್ಷಿಣ ಕನ್ನಡದಲ್ಲಿ ನೆಲಸಿದವರು ಆಗಮಿಸಲು ಸಾಧ್ಯವಾಗಿಲ್ಲ.