ತಿರುವನಂತಪುರ: ಕೇರಳ-ಕರ್ನಾಟಕ ಗಡಿಪ್ರದೇಶಗಳಲ್ಲಿ ಕರ್ನಾಟಕ ಸರಕಾರ ಮುಚ್ಚುಗಡೆ ನಡೆಸಿರುವ ಎಲ್ಲ ದಾರಿಗಳನ್ನು ತೆರೆಯುವಂತೆ ಆದೇಶ ನೀಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೇರಳಕ್ಕೆ ಆಗಮಿಸುವ ಸರಕು ವಾಹನಗಳ ಸಂಚಾರ ಈ ಮೂಲಕ ನಿಲುಗಡೆಗೊಡಿದೆ. ಹೆದ್ದಾರಿ ಮುಚ್ಚುಗಡೆ ಸಂಬಂಧ ಕರ್ನಾಟಕ ಸರಕಾರ ತಿಳಿಸುವ ಸ್ಪಷ್ಟೀಕರಣ ಸತ್ಯಕ್ಕೆ ದೂರವಾದುದು. ಕೋವಿಡ್-19 ಸೋಂಕು ಹರಡುತ್ತಿರುವುದನ್ನು ತಡೆಯಲು ಪ್ರಬಲ ಕ್ರಮಗಳನ್ನು ಕೇರಳ ಕೈಗೊಳ್ಳುತ್ತಿದೆ. ರೋಗ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಗಡಿಮುಚ್ಚುಗಡೆಗೊಂಡಿರುವ ಹಿನ್ನೆಲೆಯಲ್ಲಿ ಅಗತ್ಯ ಸಾಮಾಗ್ರಿಗಳ ಲಭ್ಯತೆ ಕಡಿಮೆಯಾಗಿದ್ದು, ಪ್ರತಿರೋಧ ಚಟುವಟಿಕೆಗಳಿಗೆ ತೊಡಕಾಗುತ್ತಿದೆ.
ಮಂಗಳೂರಿಗೆ ಆಂಬುಲೆನ್ಸ್ ತೆರಳು ಬಿಡದ ಪರಿಣಾಮ ರೋಗಿ ಮೃತಪಟ್ಟಿರುವ ಘಟನೆ ತಲಪ್ಪಾಡಿಯಲ್ಲಿ ನಡೆದಿದೆ. ಜನಸಾಮಾನ್ಯರ ಸಂಚಾರಕ್ಕಾಗಿ ಗಡಿಪ್ರದೇಶ ತೆರದಿಡಬೇಕೆಂದು ಕೇರಳ ಸರಕಾರ ಆಗ್ರಹಿಸುತ್ತಿಲ್ಲ. ತುರ್ತು ಪರಿಸ್ಥಿತಿಗಳಿಗಾಗಿ ಮತ್ತು ಸರಕು ಸಾಗಾಟಕ್ಕಾಗಿ ಈ ಆಗ್ರಹ ವ್ಯಕ್ತಪಡಿಸಲಾಗುತ್ತಿದೆ. ಈ ಸಂಬಂಧ ಅಗತ್ಯ ಆದೇಶಗಳನ್ನು ಕರ್ನಾಟಕ ಸರಕಾರಕ್ಕೆ ಕೇಂದ್ರ ಸರಕಾರ ನೀಡಬೇಕೆಂದು ವಿನಂತಿ ಪುನರಾವರ್ತಿಸಲಾಗಿದೆ. ದೇಶ ಇಷ್ಟು ದೊಡ್ಡ ಗಂಡಾಂತರ ಅನುಭವಿಸುತ್ತಿರುವವೇಳೆ ಸ್ಥಳೀಯ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ದೇಶದ ಅಖಂಡತೆಗೆ ಹಾನಿಯುಂಟುಮಾಡುವ ಇಂಥಾ ಕ್ರಮಗಳನ್ನು ಹಿಂತೆಗೆಯುವಂತೆ ಮಾಡುವಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದ್ದಾರೆ.