ತಿರುವನಂತಪುರ: ದೇಶಾದ್ಯಂತ ತೀವ್ರವಾಗಿ ವ್ಯಾಪಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಭಾರತ ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದಶಕಗಳ ಅನುಭವ ಹೊಂದಿರುವ ಕೇರಳ ವೈರಾಲಜಿಸ್ಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ದೇಶದಲ್ಲಿ ಸೃಷ್ಟಿಯಾಗಿರುವ ವೈದ್ಯಕೀಯ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಲು ದೇಶದಲ್ಲಿ ಸೂಕ್ತ ವ್ಯವಸ್ಥೆ ಜಾರಿಯಲ್ಲಿದೆ ಎಂಬುದನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಈಗ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುತ್ತಿರುವುದು ತಪ್ಪು ಎಂದು ಹಿರಿಯ ವೈರಾಲಜಿಸ್ಟ್ ಟಿ. ಜಾಕೋಬ್ ಜಾನ್ ಐ ಎ ಎನ್ ಎಸ್ ಗೆ ತಿಳಿಸಿದ್ದಾರೆ.
ಮಹಾಭಾರತ ಯುದ್ಧವು 18 ದಿನಗಳಲ್ಲಿ ಮುಗಿದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸುವ ಮೂಲಕ ನಮಗೆ ಮೂರು ದಿನಗಳ ಬೋನಸ್ ನೀಡಿದ್ದಾರೆ. ಅದು ಸಾಕಾಗುತ್ತದೆಯೇ? ಸರಿಯಾದ ಸಮಯದಲ್ಲಿ ಸರಿಯಾದ ಕೆಲಸವನ್ನು ಮಾಡಲು ಭಾರತ ವಿಫಲವಾಗಿದೆ. ಈಗ ಅದು ಸರಿಯಾದ ಕೆಲಸವನ್ನು ತಪ್ಪಾದ ಸಮಯದಲ್ಲಿ ಮಾಡುತ್ತಿದೆ. ಸರ್ಕಾರದ ಬಳಿ ಸಾಕಷ್ಟು ಸಮಯವಿತ್ತು. ಮೊದಲು ಮಾಡಬೇಕಾಗಿರುವುದು ಸರ್ಕಾರಕ್ಕೆ ಸಲಹೆ ನೀಡಲು ಕಾರ್ಯಪಡೆಯೊಂದನ್ನು ರಚಿಸಬೇಕಾಗಿತ್ತು. ಇದು 'ಮಾನವ ಸಮಸ್ಯೆ' ಮತ್ತು ಆಡಳಿತಾತ್ಮಕ ಸಮಸ್ಯೆಯಲ್ಲ" ಎಂದು ಸಾಂಕ್ರಾಮಿಕ ರೋಗಗಳನ್ನುಎದುರಿಸುವಲ್ಲಿ ಸುಮಾರು ಆರು ದಶಕಗಳ ವೃತ್ತಿಪರ ಅನುಭವ ಹೊಂದಿರುವ ಹಿರಿಯ ವೈರಾಲಜಿಸ್ಟ್ ಹೇಳಿದ್ದಾರೆ.
ಮೊದಲು ದೇಶದಲ್ಲಿ 14 ಗಂಟೆಗಳ ಲಾಕ್ ಡೌನ್ ಸಾಕು ಎನ್ನಲಾಗಿತ್ತು. ನಂತರ ದೇಶದ 80 ಜಿಲ್ಲೆಗಳಿಗೆ ಲಾಕ್ ಡೌನ್ ಎಂದು ಹೇಳಿ ದೇಶಾದ್ಯಂತ 21ದಿನಗಳ ಲಾಕ್ ಡೌನ್ ಘೋಷಿಸಲಾಗಿಯಿತು. ಈಗ 21 ದಿನಗಳ ಲಾಕ್ ಡೌನ್ ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಿದ್ದಾರೆ. ಆದರೆ ಸೋಂಕು ನಿಯಂತ್ರಣಕ್ಕೆ ಬಾರದೆ ಈ ರೀತಿ ಹೇಳುವುದು ಎಷ್ಟು ಸರಿ ಎಂದು ಡಾ. ಬಿಸಿ ರಾಯ್ ಪ್ರಶಸ್ತಿ ವಿಜೇತ ಜಾನ್ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯ ಹೇಳಿಕೆ ಬಗ್ಗೆ ನನಗೆ ತುಂಬಾ ಕೋಪ ಇದೆ. "ಎರಡು ವಾರಗಳ ನಂತರ ನಾವು ಪರಿಸ್ಥಿತಿಯನ್ನು ಮರು ಮೌಲ್ಯಮಾಪನ ಮಾಡುತ್ತೇವೆ" ಎಂದು ಅವರು ಹೇಳಬೇಕಿತ್ತು. ಅದು ಅತ್ಯಂತ ವಿಶ್ವಾಸಾರ್ಹ ಹೇಳಿಕೆಯಾಗಿರುತ್ತಿತ್ತು. ಒಂದು ವೇಳೆ ಪ್ರಧಾನಿ ಮೋದಿ ಲಾಡ್ ಡೌನ್ ಅನ್ನು ಇನ್ನೂ 21 ದಿನಗಳವರೆಗೆ ವಿಸ್ತರಿಸಿದರೆ?' 'ಹಿರಿಯ ಅಧಿಕಾರಿಯ ಇಂದಿನ ಹೇಳಿಕೆಗೆ ಏನಾಗುತ್ತದೆ?' "ಎಂದು ಜಾನ್ ಪ್ರಶ್ನಿಸಿದ್ದಾರೆ.