ತಿರುವನಂತಪುರ : ಏಳು ಮಂದಿ ಏರ್ ಇಂಡಿಯಾ ಸಿಬ್ಬಂದಿ ಸೇರಿದಂತೆ ಕೇರಳದಲ್ಲಿ ಶನಿವಾರ 58 ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ ಕಣ್ಣೂರಿನಲ್ಲಿ ಹೆಚ್ಚು ಪ್ರಕರಣ ದಾಖಲಾಗಿದೆ. ಶುಕ್ರವಾರ ಅಲಪ್ಪುಜಾ ಮೂಲದ ವ್ಯಕ್ತಿ ಕೋವಿಡ್ - 19 ಕ್ವಾರಂಟೈನ್ ಕೇಂದ್ರದಲ್ಲಿ ಮೃತಪಟ್ಟಿದ್ದ. ಆತನಿಗೆ ಕೊರೊನಾ ಸೋಂಕು ಇದ್ದ ಬಗ್ಗೆ ಶನಿವಾರ ವರದಿ ಬಂದಿದೆ. ಏರ್ ಇಂಡಿಯಾದ ಇಬ್ಬರು ಸಿಬ್ಬಂದಿಗೆ ಶುಕ್ರವಾರ ಸೋಂಕು ತಗುಲಿತ್ತು.
ಶನಿವಾರ ಏರ್ ಇಂಡಿಯಾದ 7 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ವಂದೇ ಭಾರತ್ ಮಿಷನ್ ಅಡಿ ಹಾರಾಟ ಮಾಡುವ ವಿಮಾನದಲ್ಲಿ ಸಿಬ್ಬಂದಿಗಳಾಗಿ ಇವರು ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ರಾಜ್ಯದಲ್ಲಿ ಸ್ಥಳೀಯ ಸಂಪರ್ಕದ ಮೂಲಕ ಕೋವಿಡ್ - 19 ಸೋಂಕು ಹರಡುವ ಪ್ರಮಾಣ ಶೇ 10ರಷ್ಟಿದೆ. ಆದರೆ, ಕಣ್ಣೂರು ಜಿಲ್ಲೆಯಲ್ಲಿ ಈ ಪ್ರಮಾಣ ಶೇ 20ಕ್ಕೆ ಏರಿಕೆಯಾಗಿದೆ. ಶನಿವಾರದ ಮಾಹಿತಿಯಂತೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 101.
ಶನಿವಾರ ಒಂದೇ ಕುಟುಂಬದ 13 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮೀನು ವ್ಯಾಪಾರಿ ಮೂಲಕ ಎಲ್ಲರಿಗೂ ಸೋಂಕು ಹಬ್ಬಿದೆ ಎಂದು ಶಂಕಿಸಲಾಗಿದೆ. ಕೇರಳ ಸರ್ಕಾರ ಕಣ್ಣೂರು ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಬಿಗಿಗೊಳಿಸಿದೆ. ಕೇರಳ ರಾಜ್ಯದಲ್ಲಿ ಶನಿವಾರದ ಮಾಹಿತಿಯಂತೆ ಕೋವಿಡ್ - 19 ಪ್ರಕರಣಗಳ ಸಂಖ್ಯೆ 1208. ಇವುಗಳಲ್ಲಿ 624 ಪ್ರಕರಣಗಳು ಸಕ್ರಿಯವಾಗಿವೆ.