ನವದೆಹಲಿ: ಇನ್ಮುಂದೆ ರೈಲುಗಳಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್, ಲ್ಯಾಪ್ಟಾಪ್ ಗಳನ್ನು ಚಾರ್ಜ್ ಮಾಡುವುದನ್ನು ನಿಷೇಧಿಸಿ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.
ರೈಲುಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ತಪ್ಪಿಸಲು ರಾತ್ರಿಯಲ್ಲಿ ಚಾರ್ಜಿಂಗ್ ಪಾಯಿಂಟ್ಗಳ ಬಳಕೆಯನ್ನು ಭಾರತೀಯ ರೈಲ್ವೆ ನಿರ್ಬಂಧಿಸಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಈಗ ರಾತ್ರಿ ಸಮಯದಲ್ಲಿ ರೈಲು ಬೋಗಿಗಳಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
ರೈಲುಗಳಲ್ಲಿ ಅಗ್ನಿ ಅವಘಢಗಳು ಸಂಭವಿಸದಂತೆ ತಪ್ಪಿಸಲು, ರೈಲ್ವೆ ಪ್ರಯಾಣಿಕರು ರಾತ್ರಿ ಸಮಯದ ವೇಳೆ ಚಾರ್ಜಿಂಗ್ ಪಾಯಿಂಟ್ ಬಳಕೆಯನ್ನು ನಿರ್ಬಂಧಿಸಲು ಮಾತ್ರವಲ್ಲದೆ ಧೂಮಪಾನಿಗಳ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ. ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ಬಳಸುವ ಬೋರ್ಡ್ಗಳನ್ನು ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಸ್ವಿಚ್ ಆಫ್ ಮಾಡಲಾಗುತ್ತದೆ. ಇದು ಎಲ್ಲಾ ವಿಭಾಗದ ರೈಲ್ವೆಗಳಿಗೆ ಕೇಂದ್ರ ರೈಲ್ವೆ ಮಂಡಳಿಯ ಸೂಚನೆಯಾಗಿದೆ. ನಾವು ಅದನ್ನು ಮಾರ್ಚ್ 16 ರಿಂದ ಜಾರಿಗೆ ತರಲು ಪ್ರಾರಂಭಿಸಿದ್ದೇವೆ ಎಂದು ಪಶ್ಚಿಮ ರೈಲ್ವೆಯ ಸಿಪಿಆರ್ಒ ಸುಮಿತ್ ಠಾಕೂರ್ ತಿಳಿಸಿದ್ದಾರೆ.
ಹಾಗೆಂದು ಈ ಸೂಚನೆಗಳು ಹೊಸದೇನೂ ಅಲ್ಲ, ಆದರೆ ರೈಲ್ವೆ ಮಂಡಳಿಯ ಹಿಂದಿನ ಆದೇಶಗಳನ್ನು ಪುನರುಚ್ಚರಿದೆ ಎಂದು ದಕ್ಷಿಣ ರೈಲ್ವೆ ಸಿಪಿಆರ್ಒ ಬಿ ಗುಗನೇಶನ್ ಹೇಳಿದ್ದಾರೆ. 2014 ರಲ್ಲಿ ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಎಕ್ಸ್ಪ್ರೆಸ್ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ನಂತರ, ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಚಾರ್ಜಿಂಗ್ ಸೇವೆಗಳನ್ನು ಸ್ವಿಚ್ ಆಫ್ ಮಾಡಲು ರೈಲ್ವೆ ಸುರಕ್ಷತಾ ಆಯುಕ್ತರು ಶಿಫಾರಸು ಮಾಡಿದ್ದರು. ಇದೀಗ ರೈಲ್ವೆ ಮಂಡಳಿ ಅಂತಿಮವಾಗಿ ಎಲ್ಲಾ ರೈಲು ವಲಯಗಳಿಗೆ ಈ ಆದೇಶಗಳನ್ನು ನೀಡಿದೆ. ಇತ್ತೀಚಿನ ಬೆಂಕಿಯ ಘಟನೆಗಳ ದೃಷ್ಟಿಯಿಂದ, ಈ ಕ್ರಮ ಜರುಗಿಸಿದ್ದೇವೆ. ಮುಖ್ಯ ಸ್ವಿಚ್ಬೋರ್ಡ್ನಿಂದ ವಿದ್ಯುತ್ ಅನ್ನು ರಾತ್ರಿ 11 ರಿಂದ 5 ರವರೆಗೆ ಸ್ವಿಚ್ ಆಫ್ ಮಾಡಲಾಗುತ್ತದೆ ಗುಗನೇಶನ್ ಹೇಳಿದರು.
ಪ್ರಸ್ತುತ, ರೈಲುಗಳ ಒಳಗೆ ಧೂಮಪಾನಿಗಳಿಗೆ ರೈಲ್ವೆ ಕಾಯ್ದೆಯ ಸೆಕ್ಷನ್ 167 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಧೂಮಪಾನ ಮಾಡುವ ಪ್ರಯಾಣಿಕರಿಗೆ 100 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇದಲ್ಲದೇ ರೈಲುಗಳಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುವುದು ರೈಲ್ವೆ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಅಪರಾಧಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1,000 ರೂ ಅಥವಾ ಎರಡನ್ನೂ ದಂಡ ವಿಧಿಸಬಹುದು ಮತ್ತು ಸೆಕ್ಷನ್ 165 ರ ಅಡಿಯಲ್ಲಿ 500 ರೂ.ಗಳ ದಂಡವನ್ನು ಅನ್ವಯಿಸಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ರೈಲ್ವೇ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, 'ಸುರಕ್ಷತೆಯು ರೈಲ್ವೆ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿದೆ. ರೈಲುಗಳ ಚಾಲನೆಯಲ್ಲಿನ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದು ಮತ್ತು ಮರುಪರಿಶೀಲಿಸುವುದು ಸಂಬಂಧಪಟ್ಟ ಎಲ್ಲರೂ ಮಾಡಬ ಬೇಕಾಗಿದೆ ಎಂದು ಸಚಿವರು ಸುರಕ್ಷತಾ ಕ್ರಮಗಳು ಕುರಿತು ಪರಿಶೀಲನಾ ಸಭೆಯಲ್ಲಿ ಹೇಳಿದರು ಎಂದು ಹೇಳಿದೆ.
ಈ ಹಿಂದೆ ಅಂದರೆ ಮಾರ್ಚ್ 13 ರಂದು ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಕೇವಲ ಆರು ದಿನಗಳ ಅಂತರದಲ್ಲಿ ರಾಂಚಿ ನಿಲ್ದಾಣದಲ್ಲಿ ಸರಕು ಸಾಗಾಣಿಕಾ ರೈಲಿನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿ ದುರಂತದ ವಿರುದ್ಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ರೈಲ್ವೆ ಬಳಕೆದಾರರು ಮತ್ತು ನೌಕರರು ಸೇರಿದಂತೆ ಎಲ್ಲ ಪ್ರಯಾಣಿಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಏಳು ದಿನಗಳ ತೀವ್ರ ಜಾಗೃತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಕೇಂದ್ರ ಸಾರಿಗೆ ಇಲಾಖೆ ರೈಲ್ವೆ ಮಂಡಳಿಗೆ ಸೂಚನೆ ನೀಡಿದೆ.