ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಲಾಕ್ ಡೌನ್, ಆರ್ಥಿಕ ಕುಸಿತದ ನಂತರ ಭಾರತದ ಆರ್ಥಿಕತೆ ಆಶ್ಚರ್ಯಕರ ರೀತಿಯಲ್ಲಿ ಮೊದಲಿನ ಸ್ಥಿತಿಗತಿಗೆ ಮರಳಿದ್ದು ಇನ್ನೂ ಆರ್ಥಿಕ ಕುಸಿತದ ಹೊಡೆತದಿಂದ ಸಂಪೂರ್ಣ ಚೇತರಿಕೆ ಕಂಡುಬಂದಿಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ.
ವಿಶ್ವಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ 2021-22ನೇ ಆರ್ಥಿಕ ಸಾಲಿನಲ್ಲಿ ದೇಶದ ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ) ಶೇಕಡಾ 7.5ರಿಂದ ಶೇಕಡಾ 12.5ರಷ್ಟಾಗಬಹುದು ಎಂದು ಅಂದಾಜಿಸಿದೆ.
ವಾಷಿಂಗ್ಟನ್ ನಲ್ಲಿರುವ ವಿಶ್ವಬ್ಯಾಂಕ್ ತನ್ನ ಇತ್ತೀಚಿನ ದಕ್ಷಿಣ ಏಷ್ಯಾ ಆರ್ಥಿಕ ಗುರಿ ವರದಿಯನ್ನು ಬಿಡುಗಡೆ ಮಾಡಿದ್ದು ವಿಶ್ವಾದ್ಯಂತ ಕೋವಿಡ್-19 ಸಾಂಕ್ರಾಮಿಕ ಬಂದ ಸಮಯದಲ್ಲಿ ಆರ್ಥಿಕತೆ ಕುಸಿಯಲಾರಂಭಿಸಿತು. ಹಣಕಾಸು ವರ್ಷ 2017ರಲ್ಲಿ ಶೇಕಡಾ 8.3ಕ್ಕೆ ತಲುಪಿದ್ದ ಭಾರತದ ಜಿಡಿಪಿ ಆರ್ಥಿಕ ವರ್ಷ 2020ರಲ್ಲಿ ಶೇಕಡಾ 4ಕ್ಕೆ ಕುಸಿಯಿತು. ಖಾಸಗಿ ವಲಯಗಳಲ್ಲಿ ಬೆಳವಣಿಗೆ ಕುಸಿತ, ಹಣಕಾಸು ವಲಯದಲ್ಲಿ ಕುಸಿತದಿಂದಾಗಿ ಜನರ ಹೂಡಿಕೆ ಕುಸಿದು ಜಿಡಿಪಿ ಕಡಿಮೆಯಾಯಿತು ಎಂದು ಹೇಳಿದೆ.
ಕೋವಿಡ್-19 ಸಾಂಕ್ರಾಮಿಕ ಮತ್ತು ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಇಂದಿನ ವಿದ್ಯಾಮಾನಗಳನ್ನು ಗಮನಿಸಿದರೆ, ಆರ್ಥಿಕ ವರ್ಷ 2021-22ರಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡಾ 7.5 ರಿಂದ ಶೇಕಡಾ 12.5 ರವರೆಗೆ ಇರುತ್ತದೆ, ಇಂದು ದೇಶಾದ್ಯಂತ ನಡೆಯುತ್ತಿರುವ ಕೋವಿಡ್-19 ಲಸಿಕೆ ಅಭಿಯಾನವು ಹೇಗೆ ಮುಂದುವರಿಯುತ್ತದೆ, ಹೊಸ ನಿರ್ಬಂಧಗಳು ಅಗತ್ಯವಿದೆಯೇ ಮತ್ತು ಎಷ್ಟು ಬೇಗನೆ ವಿಶ್ವ ಆರ್ಥಿಕತೆಯು ಚೇತರಿಸಿಕೊಳ್ಳುತ್ತದೆ ಎಂಬುದನ್ನು ನಿರ್ಧರಿಸಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಭಾರತ ಎಷ್ಟು ದೂರಕ್ಕೆ ಬಂದಿದೆ ಎಂದು ಆಶ್ಚರ್ಯಕರವಾಗಿದೆ. ಒಂದು ವರ್ಷದ ಹಿಂದೆ ನೀವು ಯೋಚಿಸಿದರೆ, ಆರ್ಥಿಕ ಹಿಂಜರಿತ ಎಷ್ಟಿತ್ತು, ಶೇಕಡಾ 30 ರಿಂದ 40 ರಷ್ಟು ಆರ್ಥಿಕ ಚಟುವಟಿಕೆಗಳಲ್ಲಿ ಕುಸಿತ, ಲಸಿಕೆಗಳ ಬಗ್ಗೆ ಸ್ಪಷ್ಟತೆ ಇಲ್ಲ, ರೋಗದ ಬಗ್ಗೆ ದೊಡ್ಡ ಅನಿಶ್ಚಿತತೆಯಿತ್ತು. ಇಂದು ಕೋವಿಡ್-19 ಲಸಿಕೆ ಬಂದಿದೆ. ಭಾರತವು ಮತ್ತೆ ಸಂಕಷ್ಟದಿಂದ ಹೊರಬರುತ್ತಿದೆ, ಅನೇಕ ಚಟುವಟಿಕೆಗಳು ಆರಂಭವಾಗಿವೆ, ಲಸಿಕೆ ಉತ್ಪಾದನೆಯಲ್ಲಿ ಕೂಡ ಭಾರತ ಮುಂಚೂಣಿಯಲ್ಲಿದೆ ಎಂದು ವಿಶ್ವಬ್ಯಾಂಕ್ ಮುಖ್ಯ ಆರ್ಥಿಕ ತಜ್ಞ ಹ್ಯಾನ್ಸ್ ಟಿಮ್ಮರ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಹಾಕುವುದು ಒಂದು ದೊಡ್ಡ ಸವಾಲಾಗಿದೆ. ಅನೇಕ ಮಂದಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.