ಕಾಸರಗೋಡು: ಕೇರಳದಲ್ಲಿ ಎಡರಂಗದ ಅಭಿವೃದ್ಧಿಪರ ಕಾರ್ಯಗಳಿಂದ ಸರ್ಕಾರದ ಜನಮನ್ನಣೆ ಹೆಚ್ಚಾಗಿದ್ದು, ಮತ್ತೆ ಅಧಿಕಾರಕ್ಕೇರುವುದು ಖಚಿತ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ್ದ ಅವರು ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದರು. ಬಿಜೆಪಿ ಜತೆ ಸೇರಿ ಎಡರಂಗ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಶ್ರಮಿಸುತ್ತಿದ್ದು, ಇದರಲ್ಲಿ ಯಶ್ಸು ಕಾಣದು. ಮೊತ್ತಮೊದಲ ಬಾರಿಗೆ ನೇಮಂ ವಿಧಾನಸಭೆಯಲ್ಲಿ ತೆರೆದ ಖಾತೆಯನ್ನೂ ಬಿಜೆಪಿ ಈ ಬಾರಿ ಮುಚ್ಚಬೇಕಾಗಿ ಬರಲಿದೆ. ಎಂದಿನಂತೆ ಬಿಜೆಪಿಗೆ ಈ ಬಾರಿಯೂ ಕೇರಳದಲ್ಲಿ ಶೂನ್ಯ ಸಂಪಾದನೆಯಾಗಲಿದೆ. ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಜಾರಿಯಾಗಲು ಸರ್ಕಾರ ಆಸ್ಪದ ನೀಡದು. ಕೇರಳದ ಜನತೆ ಮತ್ತೆ ಎಡರಂಗವನ್ನು ಅಧಿಕಾರಕ್ಕೇರಿಸುವುದು ಖಚಿತ ಎಂದು ತಿಳಿಸಿದರು.