ಮಂಜೇಶ್ವರ: ಬದುಕು ಎಂಬ ರಥದಲ್ಲಿ ಜೀವ ದೇವರಿರುವರು. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟಾಗ ಮಾನವೀಯ ಮೌಲ್ಯಗಳನ್ನು ಬಿತ್ತಲು ಸಾಧ್ಯ. ನಮ್ಮ ರಥವನ್ನು ನಾವು ಎಳೆಯಬೇಕಾದರೆ ಸಂಸ್ಕಾರದ ರಸವನ್ನು ಸೇವಿಸಬೇಕು. ಭಜನೆ ಧಾರ್ಮಿಕತೆಯ ಬುನಾದಿ. ಹನುಮಾನ್ ಚಾಲೀಸ ಬದುಕಿಗೆ ಆಸರೆ. ಸೇವಾ ಮನೋಭಾವನೆಯನ್ನು ಬೆಳಗಿಸಲು ಸಾಧ್ಯ. ಮನೆಮನಗಳು ಮಕ್ಕಳ ಧಾರ್ಮಿಕತೆಗಳನ್ನು ಉಳಿಸುವ ಬೆಳೆಸುವ ಸಂಸ್ಕಾರ ಕೇಂದ್ರವಾಗಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀಗಳವರ ಷಷ್ಟ್ಯಬ್ದ ಸಂಭ್ರಮ ಮೀಂಜ ಸಮಿತಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಜ್ಞಾನವಾಹಿನಿ ಮೀಂಜ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಒಡಿಯೂರು ಶ್ರೀಗಳವರ ಷಷ್ಟ್ಯಬ್ದ ಸಂಭ್ರಮ ಮಂಜೇಶ್ವರ ಸಮಿತಿಯ ಗೌರವ ಮಾರ್ಗದರ್ಶಕ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿ ಸಂಸ್ಕಾರ ಬದುಕಿಗೆ ಭದ್ರತೆಯನ್ನು ಕರುಣಿಸುವುದು. ಬದುಕಿನಲ್ಲಿ ನೆಮ್ಮದಿ ಶಾಂತಿ ಇರಬೇಕಾದರೆ ಹನುಮಾನ್ ಚಾಲೀಸಾ ಪಠಣ ಮಾಡಬೇಕು. ರಾಮ ಸ್ಮರಣೆ ಮಾಡುವವರಿಗೆ ಸೋಲಿಲ್ಲ ಎಂದು ತಿಳಿಸಿದರು.
ಸಾಧ್ವಿ ಶ್ರೀ ಮಾತಾನಂದಮಯೀ ಅವರು ಹನುಮಾನ್ ಚಾಲೀಸಾ ಪಠಿಸಿದರು. ಒಡಿಯೂರು ಶ್ರೀಗಳವರ ಷಷ್ಟ್ಯಬ್ದ ಸಂಭ್ರಮ ಮಂಜೇಶ್ವರ ವಲಯ ಸಮಿತಿಯ ಗೌರವಾಧ್ಯಕ್ಷ ಡಾ.ಶ್ರೀಧರ ಭಟ್ ಉಪ್ಪಳ ಅಧ್ಯಕ್ಷತೆ ವಹಿಸಿದ್ದರು. ದಾಸಣ್ಣ ಆಳ್ವ ಕುಳೂರು ಬೀಡು, ಷಷ್ಟ್ಯಬ್ದ ಸಂಭ್ರಮ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಮಂಜೇಶ್ವರ ವಲಯ ಅಧ್ಯಕ್ಷ ಶಶಿಧರ ಶೆಟ್ಟಿ ಜಮ್ಮದ ಮನೆ, ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಶೆಟ್ಟಿ, ಅಂಬಾರು ಸದಾಶಿವ ದೇವಸ್ಥಾನ ಆಡಳಿತ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಟ್ರಸ್ಟಿ ಪ್ರೇಮಾ ಕೆ ಭಟ್, ಶ್ರೀಧರ ಶೆಟ್ಟಿ ಮುಟ್ಟಂ, ಮೋಹನ್ ಹೆಗ್ಡೆ ಬೆಜ್ಜ, ಮಲಾರ್ ಜಯರಾಮ ರೈ, ಸೇರಾಜೆ ಗಣಪತಿ ಭಟ್, ಷಷ್ಟ್ಯಬ್ದ ಸಂಭ್ರಮ ಮಂಗಳೂರು ನಗರ ಸಮಿತಿ ಸಂಚಾಲಕ ನಾಗರಾಜ ಆಚಾರ್ಯ, ಮಂಜೇಶ್ವರ ವಲಯ ಕಾರ್ಯಾಧ್ಯಕ್ಷ ಪಿ.ಆರ್. ಶೆಟ್ಟಿ ಪೊಯ್ಯೆಲು, ಮೀಂಜ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಭಂಡಾರಿ ಉಪಸ್ಥಿತರಿದ್ದರು. ಮೀಂಜ ಪಂಚಾಯತಿಯ ವಿವಿಧ ಸ್ತರಗಳಲ್ಲಿ ಸಾಧನೆಗೈದ 60 ಸೇವಾಕರ್ತರನ್ನು ಈ ಸಂದರ್ಭ ಗೌರವಿಸಲಾಯಿತು. ಮತ್ತು ಸಾಂಕೇತಿಕವಾಗಿ ಗಿಡ ವಿತರಣಾ ಕಾರ್ಯಕ್ರಮ ಜರಗಿತು. ಮೀಂಜ ಸಮಿತಿಯ ಆಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ ವಂದಿಸಿದರು. ರಾಜರಾಮ್ ರಾವ್ ಚಿಗುರುಪಾದೆ ಹಾಗೂ ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಮಹಾಲಿಂಗೇಶ್ವರ ಕುಣಿತ ಭಜನಾ ಮಂಡಳಿ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಭಜನಾಮಂದಿರ ಬಾಳ್ಯೂರು, ಶ್ರೀ ಅಯ್ಯಪ್ಪ ಭಜನಾಮಂದಿರ ಮೀಯಪದವು, ಶ್ರೀ ಮಹಾಗಣಪತಿ ಭಜನಾ ಸಂಘ ಮದಂಗಲ್ಲು, ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿ ಕಡಂಬಾರು ಇದರ ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ಜರಗಿತು. ಕಾರ್ಯಕ್ರಮದ ಅಂಗವಾಗಿ ನಿಶ್ಮಿತಕೃಷ್ಣ ಮತ್ತು ಬಳಗದವರಿಂದ ಶಿವತಾಂಡವ ಹಾಗು ಗಂಗಾ ಭಗೀರಥ ನೃತ್ಯ ನಿರೂಪಕ ಜರಗಿತು.