ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಯಶಸ್ವಿಯಾಗಿ ಬೈಪಾಸ್ ಸರ್ಜರಿ ನಡೆಸಲಾಗಿದೆ. ಏಮ್ಸ್ ಆಸ್ಪತ್ರೆಯಲ್ಲಿ ರಾಷ್ಟ್ರಪತಿಗೆ ಬೈಪಾಸ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಏಮ್ಸ್ ನಲ್ಲಿ ರಾಮ್ ನಾಥ್ ಕೋವಿಂದ್ ಅವರಿಗೆ ಬೈಪಾಸ್ ಸರ್ಜರಿ ಯಶಸ್ವಿಯಾಗಿದೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ತಂಡವನ್ನು ಅಭಿನಂದಿಸುತ್ತೇನೆ. ರಾಷ್ಟ್ರಪತಿ ಅವರ ಆರೋಗ್ಯದ ಬಗ್ಗೆ ಏಮ್ಸ್ ವೈದ್ಯರ ಜೊತೆಗೆ ಮಾತನಾಡಿದ್ದೇನೆ. ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ರಕ್ಷಣಾ ಸಚಿವರು ಬರೆದುಕೊಂಡಿದ್ದಾರೆ.
ರಾಮನಾಥ್ ಕೋವಿಂದ್ ಅವರಿಗೆ ಶುಕ್ರವಾರ ಎದೆನೋವು ಕಾಣಿಸಿಕೊಂಡ ನಂತರ ರಾಷ್ಟ್ರ ರಾಜಧಾನಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ರಾಮ್ ನಾಥ್ ಕೋವಿಂದ್ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.