ಮುವಾಟ್ಟುಪುಳ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ.
ಹೌದು. ಕೇರಳದಲ್ಲಿ ನೆಲೆಸಿರುವ ವಲಸೆ ಕಾರ್ಮಿಕ ಅಲಾಲುದ್ದೀನ್ (40) ಅದೃಷ್ಟದ ಬಾಗಿಲು ತೆರೆದಿದ್ದು, ಒಂದೇ ದಿನದಲ್ಲಿ ಲಕ್ಷಾಧಿಪತಿಯಾಗಿದ್ದಾರೆ. ಕೇರಳದ ಲಾಟರಿಯಲ್ಲಿ 80 ಲಕ್ಷ ರೂಪಾಯಿ ಬಹುಮಾನ ಬಂದಿರುವುದನ್ನು ಕೇಳಿ ಬೆರಗಾದ ಅಲಾಲುದ್ದೀನ್, ಒಂದು ಕ್ಷಣ ನಂಬಲಾಗದೇ ಗರಬಡಿದಂತೆ ನಿಂತುಬಿಟ್ಟುರು. ಮರುಕ್ಷಣದಲ್ಲೇ ಹೆದರಿ ಎದ್ನೋ ಬಿದ್ನೋ ಅಂತಾ ಮುವಾಟ್ಟುಪುಳದ ಪೊಲೀಸ್ ಠಾಣೆಗೆ ಗುರುವಾರ ದೌಡಾಯಿಸಿದರು.
ಲಾಟರಿ ಬಹುಮಾನ ಬಂದಿದೆ ಗೊತ್ತಾದ ಬಳಿಕ ಏನು ಮಾಡಬೇಕೆಂದು ತೋಚದೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಅಲಾಲುದ್ದೀನ್ ನೆರವು ಕೇಳಿದ್ದಾರೆ. ಠಾಣೆಯಲ್ಲಿ ಪಿಆರ್ಒ ಅನಿಲ್ ಕುಮಾರ್ ಎಂಬುವರಿಗೆ ಲಾಟರಿ ಟಿಕೆಟ್ ಅನ್ನು ಹಸ್ತಾಂತರ ಮಾಡಿದ್ದಾನೆ. 80 ಲಕ್ಷ ರೂಪಾಯಿ ಬಹುಮಾನ ಬಂದಿರುವುದು ದೃಢವಾದ ಬಳಿಕ ಅಲಾಲುದ್ದೀನ್ ಖುಷಿಗೆ ಪಾರವೇ ಇರಲಿಲ್ಲ.
ಲಾಟರಿ ಟಿಕೆಟ್ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದ ನಂತರ, ಪೊಲೀಸರು ಅಲಾಲುದ್ದೀನ್ನನ್ನು ಬ್ಯಾಂಕ್ ಆಫ್ ಬರೋಡಾದ ಮುವಾಟ್ಟುಪುಳ ಶಾಖೆಗೆ ಕರೆದೊಯ್ದು ಮ್ಯಾನೇಜರ್ ಬಿಜೋಮೋನ್ಗೆ ಎಲ್ಲವನ್ನು ವಿವರಿಸಿದರು. ಮ್ಯಾನೇಜರ್ ಲಾಟರಿ ಟಿಕೆಟ್ ಪಡೆದು ರಶೀದಿ ಕೊಟ್ಟರು.
ಮ್ಯಾನೇಜರ್ ಬಿಜೋಮೋನ್ ಅವರಿಗೆ ಬ್ಯಾಂಕ್ ಆಫ್ ಬರೋಡಾದ ಮುವಾಟ್ಟುಪುಳ ಶಾಖೆಯಲ್ಲಿ ಮೊದಲ ದಿನದ ಕೆಲಸ ಆರಂಭಿಸಿದ್ದರು. ಮೊದಲ ದಿನವೇ ವ್ಯಕ್ತಿಯೊಬ್ಬನಿಗೆ 80 ಲಕ್ಷ ರೂ. ಲಾಟರಿ ಹೊಡೆದಿರುವುದರಿಂದ ಆ ದಿನ ಅವರಿಗೆ ಮಹತ್ವದ್ದಾಗಿತ್ತು. ಮುಂದಿನ ಪ್ರಕ್ರಿಯೆ ಶುಕ್ರವಾರದೊಳಗೆ ಪೂರ್ಣಗೊಳಿಸಿ, ತೆರಿಗೆ ಸೇರಿದಂತೆ ಪ್ರಕ್ರಿಯೆ ಬೇಕಾದ ಹಣವನ್ನು ಕಡಿತಗೊಳಿಸಿ, ಉಳಿದ ಬಹುಮಾನದ ಹಣವನ್ನು ಅಲಾಲುದ್ದೀನ್ಗೆ ಹಸ್ತಾಂತರ ಮಾಡಲಾಗಿದೆ.
ಈ ಒಂದು ಕ್ಷಣದ ಬಗ್ಗೆ ಮಾತನಾಡಿರುವ ಪಿಆರ್ಒ ಎಸ್ಐ ಅನಿಲಕುಮಾರ್, ಇದು ನನ್ನ ಜೀವನದಲ್ಲಿ ನಡೆದ ಅಪರೂಪದ ಘಟನೆ ಎಂದರು. ಅಸ್ಸಾಂನ ನಾಗಾಂವ್ ಮೂಲದ ಅಲಾಲುದ್ದೀನ್ 15 ವರ್ಷಗಳಿಂದ ಕೇರಳದಲ್ಲಿ ನೆಲೆಸಿದ್ದಾರೆ. ಇವರು ಮುವಾಟ್ಟುಪುಳದ ಪೇಝಕ್ಕಪ್ಪಿಲ್ಲಿ ಎಂಬಲ್ಲಿ ನೆಲೆಸಿದ್ದು ಮರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಅವರ ಕುಟುಂಬ ಅಸ್ಸಾಂನಲ್ಲಿದೆ ಎಂದು ಮಾಹಿತಿ ನೀಡಿದರು.
ಅಂದಹಾಗೆ ಅಲಾಲುದ್ದೀನ್, ಮನೆ ಮನೆಗೆ ಲಾಟರಿ ಟಿಕೆಟ್ ಮಾರಾಟ ಮಾಡಿಕೊಂಡು ಬರುವ ವ್ಯಕ್ತಿಯಿಂದ ಟಿಕೆಟ್ ಖರೀದಿಸಿದ್ದ. ಇಂದು ಆ ಟಿಕೆಟ್ನಿಂದ ಆತನ ಬದುಕೇ ಬದಲಾಗಿದ್ದು, ಮತ್ತೆ ಊರಿಗೆ ತೆರಳಿ ಪತ್ನಿ ಮಕ್ಕಳಿಗೆ ಸಂತೋಷಕರ ಜೀವನವನ್ನು ಕಟ್ಟಿಕೊಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.