ನವದೆಹಲಿ: ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವೆಡೆ ಕಾಂಗ್ರೆಸ್ ಸೇರಿದಂತೆ ಹಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ರೈಲಿಗೆ ಬೆಂಕಿ ಹಚ್ಚುವುದು, ಆಸ್ತಿಪಾಸ್ತಿ ಹಾಳು ಮಾಡುವುದು, ಕಲ್ಲು ತೂರಾಟ… ಹೀಗೆ ನೂರಾರು ಕೋಟಿ ರೂಪಾಯಿಗಳನ್ನು ನಷ್ಟ ಮಾಡಿದ್ದಾರೆ ಪ್ರತಿಭಟನಾಕಾರರು.
ಈ ಕುರಿತು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ಏರ್ ಮಾರ್ಷಲ್ ಎಸ್ಕೆ ಝಾ ಸೇರಿದಂತೆ ಸೇನಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೂನ್ 24ರಿಂದ ಆರಂಭ
ಅಗ್ನಿವೀರರ ಮೊದಲ ಬ್ಯಾಚ್ನ ನೋಂದಣಿ ಪ್ರಕ್ರಿಯೆ ಜೂನ್ 24ರಂದು ಆರಂಭವಾಗಲಿದೆ. ಜುಲೈ 24ರಂದು ಮೊದಲ ಹಂತದ ಆನ್ಲೈನ್ ಪರೀಕ್ಷೆ ಪ್ರಕ್ರಿಯೆ ನಡೆಯಲಿದೆ. ಮೊದಲ ಬ್ಯಾಚ್ನ ಪ್ರವೇಶಾತಿ ಡಿಸೆಂಬರ್ ವೇಳೆಗೆ ಜರುಗಲಿದೆ. ಡಿಸೆಂಬರ್ 30ರಿಂದ ತರಬೇತಿ ಶುರುವಾಗಲಿದೆ ಎಂದು ಏರ್ ಮಾರ್ಷಲ್ ಎಸ್.ಕೆ ಝಾ ತಿಳಿಸಿದ್ದಾರೆ.
ಸದ್ಯ 46 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಿದ್ದೇವೆ. ಶೀಘ್ರವೇ ಈ ಸಂಖ್ಯೆಯನ್ನು ಒಂದೂವರೆ ಲಕ್ಷಕ್ಕೆ ಏರಿಸಲಿದ್ದೇವೆ. ಮುಂದಿನ 4-5 ವರ್ಷಗಳಲ್ಲಿ ತಮ್ಮ ಸೈನಿಕರ ನೇಮಕಾತಿ 50 ಸಾವಿರದಿಂದ 60 ಸಾವಿರ ಆಗಲಿದ್ದು, ತದನಂತರ 90 ಸಾವಿರದಿಂದ ಲಕ್ಷಕ್ಕೆ ಏರುತ್ತದೆ. ಇದಾದ ಬಳಿಕ ಒಂದೂವರೆ ಲಕ್ಷ ಯುವಕರ ನೇಮಕ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ ಮೊದಲ ವಾರದ ವೇಳೆಗೆ, 25,000 ಅಗ್ನಿವೀರರ ಮೊದಲ ಬ್ಯಾಚ್ ನಮಗೆ ಸಿಗಲಿದ್ದು, ಎರಡನೇ ಬ್ಯಾಚ್ ಫೆಬ್ರವರಿ 2023ರಲ್ಲಿ ಲಭ್ಯವಾಗಲಿದೆ. ಅದರಲ್ಲಿ 40,000 ಮಂದಿ ಇರಲಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನ್ನಪ್ಪ ತಿಳಿಸಿದ್ದಾರೆ.
ಪ್ರತಿಭಟನಾಕಾರರಿಗಿಲ್ಲ ಅವಕಾಶ:
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಗಲಭೆ ಮಾಡುತ್ತಿರುವ, ಬೆಂಕಿ ಹಚ್ಚುತ್ತಿರುವ, ಕಲ್ಲು ತೂರಾಟ ನಡೆಸುತ್ತಿರುವ ಯುವಕರಿಗೆ ನೇಮಕಾತಿ ಪ್ರಕ್ರಿಯೆಯಿಂದ ಹೊರಕ್ಕೆ ಇಡಲಾಗಿದೆ. ಈ ಕುರಿತು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಸ್ಪಷ್ಟಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಗೆ ಬರುವ ಪ್ರತಿಯೊಬ್ಬರೂ ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿಲ್ಲ ಎಂದು ಪ್ರಮಾಣಪತ್ರ ನೀಡಬೇಕಾಗುತ್ತದೆ. ನೇಮಕಾತಿಗೆ ಆಗಮಿಸುವ ಪ್ರತಿಯೊಬ್ಬರ ಪೊಲೀಸ್ ವೆರಿಫಿಕೇಷನ್ ನಡೆಯುತ್ತದೆ. ಪೊಲೀಸರಿಂದ ಗ್ರೀನ್ ಸಿಗ್ನಲ್ ಸಿಕ್ಕ ನಂತರವಷ್ಟೇ ಅಂಥವರನ್ನು ನೇಮಕಾತಿಗೆ ಪರಿಗಣಿಸಲಾಗುವುದು ಎಂದು ಪುರಿ ತಿಳಿಸಿದ್ದಾರೆ.
'ಮೂರೂ ವಿಭಾಗಗಳಿಂದ ಪ್ರತಿ ವರ್ಷವೂ ಸುಮಾರು 17,600 ಮಂದಿ ಅವಧಿಗೆ ಮುನ್ನವೇ ನಿವೃತ್ತಿ ಪಡೆಯುತ್ತಿದ್ದಾರೆ. ನಿವೃತ್ತಿ ಬಳಿಕ ಏನು ಮಾಡುತ್ತೀರಿ ಎಂದು ಯಾರೂ ಕೂಡ ಅವರನ್ನು ಕೇಳಲು ಹೋಗಿಲ್ಲ. ಅಗ್ನಿವೀರರು ಕೂಡ ಹಾಲಿ ಸೇವೆಯಲ್ಲಿರುವ ಸಾಮಾನ್ಯ ಸೈನಿಕರಂತೆಯೇ ಸಿಯಾಚಿನ್ ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಅದೇ ಭತ್ಯೆಯನ್ನು ಪಡೆಯಲಿದ್ದಾರೆ. ಸೇವಾ ಪರಿಸ್ಥಿತಿಗಳಲ್ಲಿ ಅವರ ನಡುವೆ ಯಾವುದೇ ತಾರತಮ್ಯ ಇರುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಅಗ್ನಿಪಥದಡಿ ಸಿಗುವ ಸೌಲಭ್ಯಗಳು:
* ಭಾರತೀಯ ವಾಯುಸೇನೆ ಯೋಧರಿಗೆ ವೇತನದ ಜೊತೆಗೆ ಸಂಕಷ್ಟ ಭತ್ಯೆ, ಸಮವಸ್ತ್ರ ಭತ್ಯೆ, ಕ್ಯಾಂಟೀನ್ ಸೌಲಭ್ಯ, ವೈದ್ಯಕೀಯ ಸೌಲಭ್ಯ ಸೇರಿದಂತೆ ಸಾಮಾನ್ಯ ಸೈನಿಕರಿಗೆ ನೀಡುವ ಎಲ್ಲಾ ಸೌಲಭ್ಯ ಸಿಗಲಿವೆ.
* ಒಂದು ವರ್ಷದಲ್ಲಿ 30 ದಿನ ರಜೆ ಘೋಷಿಸಲಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಅನಾರೋಗ್ಯ ರಜೆ(ಮೆಡಿಕಲ್ ಲೀವ್) ನೀಡಲಾಗುತ್ತದೆ.
* ನಾಲ್ಕು ವರ್ಷಗಳ ಸೇವಾವಧಿಯ ಸಂದರ್ಭದಲ್ಲಿ ಮೃತಪಟ್ಟರೆ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ರೂಪಾಯಿ ಗೌರವ ಧನವನ್ನು ನೀಡಲಾಗುತ್ತದೆ. '
* ಒಂದು ವೇಳೆ ಸೇವಾವಧಿಯ ಸಂದರ್ಭದಲ್ಲಿ ಅಂಗವೈಕಲ್ಯಕ್ಕೆ ತುತ್ತಾದರೆ, 44 ಲಕ್ಷ ರೂಪಾಯಿ ಜೊತೆಗೆ ಉಳಿದ ಅವಧಿಯ ಪೂರ್ಣ ವೇತನವನ್ನು ನೀಡಲಾಗುವುದು. ಇದರ ಜೊತೆಗೆ ಸೇವಾ ನಿಧಿ ಪ್ಯಾಕೇಜ್ ಕೂಡ ಲಭ್ಯವಿರುತ್ತದೆ.
ಮಹಿಳೆಯರಿಗೂ ಅವಕಾಶ
ಭಾರತೀಯ ನೌಕಾಪಡೆಯಲ್ಲಿ ಪ್ರಸ್ತುತ 30 ಮಹಿಳಾ ಅಧಿಕಾರಿಗಳು ವಿಭಿನ್ನ ನೌಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯಡಿ ಮಹಿಳೆಯರನ್ನು ಕೂಡ ನೇಮಕ ಮಾಡಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಅವರನ್ನು ಕೂಡ ಯುದ್ಧ ನೌಕೆಗಳಲ್ಲಿ ನಿಯೋಜಿಸಲಾಗುವುದು ಎಂದಿದ್ದಾರೆ.