ವುಹಾನ್ ಪ್ರಯೋಗಾಲಯದಲ್ಲಿ ಸಂಭವಿಸಿದ ದುರಂತವು ವೈರಸ್ ಹುಟ್ಟಿಕೊಂಡಿದ್ದಕ್ಕೆ ಸ್ಪಷ್ಟ ವಿವರಣೆಯಾಗಿದೆ. 2019ರ ಕೊನೆಯಲ್ಲಿ ಅಲ್ಲಿಯೇ ಮೊದಲ ಸೋಂಕು ಕಾಣಿಸಿಕೊಂಡಿದ್ದು ಎಂದು ಅವರು ಯುರೋಪ್ನ ರಾಜಕಾರಣಿಗಳ ಜತೆ ಹೇಳಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ. ಆದಾಗ್ಯೂ, ವೈಜ್ಞಾನಿಕವಾಗಿ ಪುರಾವೆ ದೊರೆಯುವವರೆಗೂ ಇದೆಲ್ಲವೂ ಊಹಾಪೋಹಗಳಿಂದ ಕೂಡಿರಲಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ. ವೈರಸ್ ಎಲ್ಲಿಂದ ಬಂತು, ಮಾನವ ದೇಹವನ್ನು ಹೇಗೆ ಪ್ರವೇಶಿಸಿತು ಎಂಬುದಕ್ಕೆ ನಮ್ಮ ಬಳಿ ನಿಖರವಾದ ಉತ್ತರವಿಲ್ಲ. ಭವಿಷ್ಯದ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ವೈರಸ್ ಮೂಲವನ್ನು ಅರ್ಥಮಾಡಿಕೊಳ್ಳುವುದು ವೈಜ್ಞಾನಿಕವಾಗಿ ಬಹಳ ಮುಖ್ಯವಾಗಿದೆ ಎಂದು ಘಬ್ರೆಯಸ್ ಈ ಹಿಂದೆ ಹೇಳಿದ್ದರು.
ಜನರ ಬೇಜವಾಬ್ದಾರಿ ವರ್ತನೆ: ಜನರ ಬೇಜವಾಬ್ದಾರಿ ವರ್ತನೆಯಿಂದಾಗಿ ಭಾರತದಲ್ಲಿ ಮತ್ತೆ ಕೋವಿಡ್ ಸೋಂಕು ಹೆಚ್ಚಳವಾಗಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಲಸಿಕೆ ಹಾಕಿಸಿಕೊಂಡಿರುವುದರಿಂದ ತಮಗೇನು ಆಗುವುದಿಲ್ಲ ಎಂಬ ಮನೋಭಾವ ಜನರಲ್ಲಿದೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಸುರಕ್ಷತಾ ನಿಯಮಗಳನ್ನು ಮರೆತು ನಿರ್ಭೀತಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಕೋಲ್ಕತದ ವೈದ್ಯರ ಜಂಟಿ ವೇದಿಕೆಯ ಹಿರಾಲಾಲ್ ಕೊನಾರ್ ತಿಳಿಸಿದ್ದಾರೆ.
ಅಹಮದಾಬಾದ್ನಲ್ಲಿ ಒಮಿಕ್ರಾನ್ ಉಪತಳಿ ಹೆಚ್ಚಳ: ಗುಜರಾತ್ನಲ್ಲಿ ಒಮಿಕ್ರಾನ್ನ ಉಪತಳಿ ಬಿಎ.2.38 ನಿಂದಾಗಿ ಕರೊನಾ ಪ್ರಕರಣಗಳ ಸಂಖ್ಯೆ 15 ದಿನಗಳಲ್ಲಿ 4 ಪಟ್ಟು ಹೆಚ್ಚಾಗಿದೆ. ಮೇ 21ರಲ್ಲಿ 528 ಇದ್ದ ಪ್ರಕರಣಗಳ ಸಂಖ್ಯೆ ಜೂ.4ರ ವೇಳೆಗೆ 2,249ಕ್ಕೆ ಏರಿಕೆಯಾಗಿದೆ. ಒಟ್ಟು ರೋಗಿಗಳಲ್ಲಿ ಶೇ. 52 ಮಂದಿಯಲ್ಲಿ ಬಿಎ.2.38. ಇರುವುದು ಪತ್ತೆಯಾಗಿದೆ. ಇದು ದೈನಂದಿನ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಗುಜರಾತ್ ಬಯೋಟೆಕ್ನಾಲಜಿ ರೀಸರ್ಚ್ ಸೆಂಟರ್ (ಜಿಬಿಆರ್ಸಿ) ತಿಳಿಸಿದೆ.
12,781 ಹೊಸ ಪ್ರಕರಣ: ದೇಶದಲ್ಲಿ ಸೋಮವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನಲ್ಲಿ 12,781 ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಸಕ್ರಿಯ ಕೇಸ್ಗಳ ಸಂಖ್ಯೆ 76,700ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 18 ಜನರು ಕರೊನಾದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಕರೊನಾದಿಂದ ಮೃತರಾದವರ ಸಂಖ್ಯೆ 5,24,873ಕ್ಕೆ ಏರಿಕೆಯಾಗಿದೆ. ಚೇತರಿಸಿಕೊಂಡವರ ಸಂಖ್ಯೆ 4,27,07,900ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.