ತಿರುವನಂತಪುರ: ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ವಿಳಂಬದಿಂದ ಕಿಡ್ನಿ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಸಮಯಕ್ಕೆ ಸರಿಯಾಗಿ ಕಿಡ್ನಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರ ತೀವ್ರ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ತಡವಾಗಿ ರೋಗಿ ಮೃತರಾದರು.
ಎರ್ನಾಕುಳಂ ರಾಜಗಿರಿ ಆಸ್ಪತ್ರೆಯಲ್ಲಿ ಮಿದುಳು ನಿಷ್ಕಿಯರಾದ ವ್ಯಕ್ತಿಯಿಂದ ತೆಗೆದ ಕಿಡ್ನಿಯನ್ನು ಪೋಲೀಸ್ ಬೆಂಗಾವಲಿನಲ್ಲಿ ಎರಡೂವರೆ ಗಂಟೆಯೊಳಗೆ ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಯಿತು. ತುರ್ತು ಪರಿಸ್ಥಿತಿಯಿಂದಾಗಿ ರಾಜಗಿರಿಯಿಂದ ತಿರುವನಂತಪುರಂವರೆಗಿನ ಟ್ರಾಫಿಕ್ ಸಿಗ್ನಲ್ ಗಳನ್ನು ಬಂದ್ ಮಾಡಲಾಗಿದ್ದು, ಪೋಲೀಸರು ಆಂಬ್ಯುಲೆನ್ಸ್ ಗಾಗಿ ಗ್ರೀನ್ ಚಾನೆಲ್ ಸಿದ್ಧಪಡಿಸಿ ವ್ಯವಸ್ಥೆಗೊಳಿಸಿದ್ದರು. ನಿನ್ನೆ ಸಂಜೆ 5.30ರ ಸುಮಾರಿಗೆ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಅಂಗವನ್ನು ತಲುಪಿಸಲಾಯಿತು. ಆದರೆ ಕಿಡ್ನಿ ವೈಫಲ್ಯಕ್ಕೆ ಒಳಗಾದ ರೋಗಿಗೆ 4 ಗಂಟೆಗಳ ನಂತರ ಶಸ್ತ್ರಚಿಕಿತ್ಸೆ ಆರಂಭಿಸಲಾಯಿತು. ರಾತ್ರಿ 9.30 ರ ನಂತರ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ ರೋಗಿಯು ಸಾವನ್ನಪ್ಪಿದರು.
ಶಸ್ತ್ರಚಿಕಿತ್ಸೆ ಮಾಡಬೇಕಾದ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ಗೊತ್ತಿದ್ದರೂ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿರಲಿಲ್ಲ. ಅಂಗಾಂಗಗಳೊಂದಿಗೆ ಬಂದವರಿಗೆ ಹೇಗೆ ಸಹಾಯ ಮಾಡಬೇಕು ಎಂಬ ಸ್ಪಷ್ಟತೆಯೂ ಇರಲಿಲ್ಲ. ಮೂತ್ರಪಿಂಡ ಮತ್ತು ಮೂತ್ರಶಾಸ್ತ್ರ ವಿಭಾಗಗಳು ಜಂಟಿ ಕಾರ್ಯಾಚರಣೆಗೆ ಯಾವುದೇ ಅಗತ್ಯ ಸಿದ್ಧತೆಗಳನ್ನು ಮಾಡಲಿಲ್ಲ.
ಆದರೆ, ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೂ ಮುನ್ನ ಡಯಾಲಿಸಿಸ್ ಮಾಡಬೇಕಿದ್ದು, ಅದು ವಿಳಂಬವಾಯಿತು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಅಂಗಾಂಗ ಕಸಿ ಕಾರ್ಯಾಚರಣೆ ವಿಳಂಬವಾಗಿದೆ ಎಂಬ ವರದಿಗಳ ಕುರಿತು ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದಾರೆ. ಕೂಡಲೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಚಿವರು ಸೂಚಿಸಿದರು. ಲೋಪವೆಸಗಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಘಟನೆಗೆ ಸಂಬಂಧಿಸಿದಂತೆ ಶೀಘ್ರವೇ ಉನ್ನತ ಮಟ್ಟದ ಸಭೆ ಕರೆಯಲಾಗುವುದು ಎಂದು ಸಚಿವೆ ಮಾಹಿತಿ ನೀಡಿದ್ದಾರೆ.