ಚೆನ್ನೈ: ಕೊಯಮತ್ತೂರು ಮತ್ತು ಅಕ್ಕಪಕ್ಕದ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಶಿರುವಣಿ ಅಣೆಕಟ್ಟಿನಲ್ಲಿ ಸಂಪೂರ್ಣ ನೀರು ಉಳಿಸಿಕೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೇರಳಕ್ಕೆ ಸೂಚಿಸಿದ್ದಾರೆ. ಶಿರುವಣಿ ಅಣೆಕಟ್ಟಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 877 ಮೀಟರ್. ಆದರೆ, ಅಣೆಕಟ್ಟೆಯ ಪೂರ್ಣ ಸಾಮರ್ಥ್ಯವನ್ನು 878.50 ಮೀಟರ್ಗೆ ಹೆಚ್ಚಿಸಬೇಕು ಎಂದು ಅಂತಾರಾಜ್ಯ ಒಪ್ಪಂದದಲ್ಲಿ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಬರೆದ ಪತ್ರದಲ್ಲಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ನೀರಿನ ಮಟ್ಟವನ್ನು 1.5 ಅಡಿಗಳಷ್ಟು ಕಡಿಮೆ ಮಾಡುವುದರಿಂದ 122.05 ದಶಲಕ್ಷ ಘನ ಅಡಿಗಳಷ್ಟು (MCFT) ನೀರಿನ ಕೊರತೆ ಉಂಟಾಗುತ್ತದೆ. ಇದು ಒಟ್ಟು ಸಂಗ್ರಹವಾಗಿರುವ ನೀರಿನಲ್ಲಿ ಶೇ.19 ರಷ್ಟಿದೆ. ಸ್ಟಾಲಿನ್ ಪ್ರಕಾರ, ಬೇಸಿಗೆಯಲ್ಲಿ ಕೊಯಮತ್ತೂರು ಪ್ರದೇಶದಾದ್ಯಂತ ತೀವ್ರ ನೀರಿನ ಕೊರತೆಯ ಸಂದರ್ಭದಲ್ಲಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಒಪ್ಪಂದದಲ್ಲಿ ಉಲ್ಲೇಖಿಸಲಾದ 1.30 ಟಿಎಂಸಿಯಲ್ಲಿ ತಮಿಳುನಾಡಿಗೆ ಇದುವರೆಗೆ 0.484 ರಿಂದ 1.128 ಟಿಎಂಸಿ ಮಾತ್ರ ಬಂದಿದೆ.
ಇದೇ ಬೇಡಿಕೆಯನ್ನು ಸೂಚಿಸಿ ಪಿಣರಾಯಿ ವಿಜಯನ್ ಅವರಿಗೆ ಈ ಹಿಂದೆ ಪತ್ರ ಬರೆದಿದ್ದರೂ, ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕೇರಳ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ವಿಚಾರದಲ್ಲಿ ಮತ್ತೊಮ್ಮೆ ಪಿಣರಾಯಿ ವಿಜಯನ್ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸುತ್ತಿರುವುದಾಗಿ ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ. ಶಿರುವಣಿ ಅಣೆಕಟ್ಟು ಪಾಲಕ್ಕಾಡ್ ಜಿಲ್ಲೆಯಲ್ಲಿ ಭವಾನಿ ನದಿಯ ಉಪನದಿಯಾದ ಶಿರುವಣಿ ನದಿಯ ದಡದಲ್ಲಿದೆ.