ನವದೆಹಲಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ 'ಅಗ್ನಿಪಥ್' ವಿರುದ್ಧ ಇದಾಗಲೇ ಹಲವು ಕಡೆಗಳಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಕೆಲವೆಡೆ ಇದು ಹಿಂಸಾಚಾರಕ್ಕೂ ತಿರುಗಿದೆ. ಸೈನಿಕರಾಗಿ ದೇಶಭಕ್ತಿ ಮೆರೆಯುತ್ತೇವೆ ಎನ್ನುವ ಸೇನಾ ಆಕಾಂಕ್ಷಿಗಳು ಇದಾಗಲೇ ಪ್ರತಿಭಟನೆಯ ಹೆಸರಿನಲ್ಲಿ ದೇಶದ ಸಹಸ್ರಾರು ಕೋಟಿ ರೂಪಾಯಿಗಳ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದ್ದಾರೆ, ಮಾಡುತ್ತಲಿದ್ದಾರೆ.
ಇದರ ನಡುವೆಯೇ, ನಾಲ್ಕು ವರ್ಷಗಳ ಅವಧಿಗೆ 46 ಸಾವಿರ ಮಂದಿ ಯುವಕರನ್ನು ಸೇನೆಗೆ ನೇಮಿಸಿಕೊಳ್ಳುವ ಅಗ್ನಿಪಥ್ ಯೋಜನೆಗಳ ವಿವರಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಜೂನ್ 24ರಿಂದ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಏನಿದು ಯೋಜನೆ?
17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ಆರಂಭದಲ್ಲಿ 46 ಸಾವಿರ ಪೋಸ್ಟ್ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಶೇ 25ರಷ್ಟು ಮಂದಿಗೆ ಕಾಯಂ ನೇಮಕಾತಿ ಮಾಡಿಕೊಳ್ಳಲಾಗುವುದು. ಇವರು ಮಾಮೂಲಿ ಸೈನಿಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದಾರೆ.
ವಯೋಮಿತಿ:
17.5 ವರ್ಷದಿಂದ 23 ವರ್ಷ. ಶೈಕ್ಷಣಿಕ ಅರ್ಹತೆಗಳು ಮತ್ತು ದೈಹಿಕ ಮಾನದಂಡಗಳನ್ನು ಭಾರತೀಯ ವಾಯುಪಡೆಯಿಂದ ನೀಡಲಾಗುತ್ತದೆ.
ತರಬೇತಿ:
6 ತಿಂಗಳು
ವೇತನ:
ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ.
ಅಗ್ನಿಪಥದಡಿ ಸಿಗುವ ಸೌಲಭ್ಯಗಳು:
* ಭಾರತೀಯ ವಾಯುಸೇನೆ ಯೋಧರಿಗೆ ವೇತನದ ಜೊತೆಗೆ ಸಂಕಷ್ಟ ಭತ್ಯೆ, ಸಮವಸ್ತ್ರ ಭತ್ಯೆ, ಕ್ಯಾಂಟೀನ್ ಸೌಲಭ್ಯ, ವೈದ್ಯಕೀಯ ಸೌಲಭ್ಯ ಸೇರಿದಂತೆ ಸಾಮಾನ್ಯ ಸೈನಿಕರಿಗೆ ನೀಡುವ ಎಲ್ಲಾ ಸೌಲಭ್ಯ ಸಿಗಲಿವೆ.
* ಒಂದು ವರ್ಷದಲ್ಲಿ 30 ದಿನ ರಜೆ ಘೋಷಿಸಲಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಅನಾರೋಗ್ಯ ರಜೆ(ಮೆಡಿಕಲ್ ಲೀವ್) ನೀಡಲಾಗುತ್ತದೆ.
* ನಾಲ್ಕು ವರ್ಷಗಳ ಸೇವಾವಧಿಯ ಸಂದರ್ಭದಲ್ಲಿ ಮೃತಪಟ್ಟರೆ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ರೂಪಾಯಿ ಗೌರವ ಧನವನ್ನು ನೀಡಲಾಗುತ್ತದೆ. '
* ಒಂದು ವೇಳೆ ಸೇವಾವಧಿಯ ಸಂದರ್ಭದಲ್ಲಿ ಅಂಗವೈಕಲ್ಯಕ್ಕೆ ತುತ್ತಾದರೆ, 44 ಲಕ್ಷ ರೂಪಾಯಿ ಜೊತೆಗೆ ಉಳಿದ ಅವಧಿಯ ಪೂರ್ಣ ವೇತನವನ್ನು ನೀಡಲಾಗುವುದು. ಇದರ ಜೊತೆಗೆ ಸೇವಾ ನಿಧಿ ಪ್ಯಾಕೇಜ್ ಕೂಡ ಲಭ್ಯವಿರುತ್ತದೆ.
ಪಾಲಕರ ಅನುಮತಿ:
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರವೇಶಕ್ಕೆ ಪಾಲಕರ ಒಪ್ಪಿಗೆಯ ಸಹಿ ಅಗತ್ಯವಿರಲಿದೆ. ನಾಲ್ಕು ವರ್ಷದ ಬಳಿಕ ಅಗ್ನಿವೀರರು ಸಮಾಜದ ಚಟುವಟಿಕೆಗಳಿಗೆ ಹಿಂದಿರುಗಬಹುದು. ಆದರೆ ಐಎಎಫ್ನ ಸಾಂಸ್ಥಿಕ ಅಗತ್ಯಗಳು ಮತ್ತು ನೀತಿಗಳ ಆಧಾರದಲ್ಲಿ ಐಎಎಫ್ನ ಸಾಮಾನ್ಯ ಕೇಡರ್ನಲ್ಲಿ ಸೇರಿಕೊಳ್ಳಲು ಅರ್ಜಿ ಸಲ್ಲಿಸುವ ಅವಕಾಶವಿದೆ. ಪ್ರತಿ ಅಗ್ನಿವೀರರು ಬೆಳೆಸಿಕೊಳ್ಳುವ ಕೌಶಲವನ್ನು ಅವರ ಪ್ರಮಾಣಪತ್ರದಲ್ಲಿ ದಾಖಲಿಸುವ ಮೂಲಕ ಅವರ ರೆಸ್ಯೂಮ್ಗಳಲ್ಲಿ ಅಳವಡಿಸಲಾಗುತ್ತದೆ.
ತರಬೇತಿ:
6 ತಿಂಗಳು