ಕೊಚ್ಚಿ: ಬೆಂಗಳೂರಿನಿಂದ ಕೊಚ್ಚಿಗೆ ಹೊರಟಿದ್ದ ಅಲಯನ್ಸ್ ಏರ್ ವಿಮಾನದಲ್ಲಿ ಬ್ಯಾಟರಿ ಚಾಲಿತ ತನ್ನ ಗಾಲಿಕುರ್ಚಿಯೊಂದಿಗೆ ಪ್ರಯಾಣಿಸಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಅವಕಾಶ ನಿರಾಕರಿಸಲಾಯಿತು ಎಂದು ಪ್ರಶಸ್ತಿ ಪುರಸ್ಕೃತ ಕಲಾವಿದೆಯೊಬ್ಬರು ದೂರಿದ್ದಾರೆ.
'ನನ್ನ ಸ್ನೇಹಿತನ ಜತೆಗೆ ಕೊಚ್ಚಿ ತಲುಪಲು ₹8 ಸಾವಿರ ಮೊತ್ತದ ಟಿಕೆಟ್ ಕಾಯ್ದಿರಿಸಿದ್ದೆ. ಆದರೆ, ವಿಮಾನದಲ್ಲಿ ಗಾಲಿ ಕುರ್ಚಿ ಕೊಂಡೊಯ್ಯಲು ನನಗೆ ಅವಕಾಶ ನಿರಾಕರಿಸಲಾಯಿತು. ಗಾಲಿಕುರ್ಚಿ ಬಿಡಬೇಕು ಇಲ್ಲವೇ ಬೇರೆ ವಿಮಾನ ಹತ್ತಬೇಕು ಎನ್ನುವ ಏಕೈಕ ಆಯ್ಕೆಯನ್ನು ಅಲಯನ್ಸ್ ಏರ್ಲೈನ್ಸ್ ಸಂಸ್ಥೆ ಸಿಬ್ಬಂದಿ ನನಗೆ ನೀಡಿದರು. ಸಿಬ್ಬಂದಿ ನನ್ನೊಂದಿಗೆ ದ್ವೇಷಪೂರಿತ ವರ್ತನೆ ತೋರಿದರು' ಎಂದು ಕಲಾವಿದೆ ಸರಿತಾ ದ್ವಿವೇದಿ ಸೋಮವಾರ ದೂರಿದ್ದಾರೆ.
ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧ್ಯ ಸಿಂಧ್ಯಾ ಅವರಿಗೂ ಟ್ವೀಟ್ ಮಾಡಿರುವ ಸರಿತಾ, 'ಕೊಚ್ಚಿ ತಲುಪಲು ಮತ್ತೊಂದು ಖಾಸಗಿ ವಿಮಾನದಲ್ಲಿ ಗಾಲಿಕುರ್ಚಿಯೊಂದಿಗೆ ಪ್ರಯಾಣಿಸಲು ಸುಮಾರು ₹ 14,000 ಖರ್ಚು ಮಾಡಬೇಕಾಯಿತು. ಅಲಯನ್ಸ್ ಏರ್ ವಿಮಾನ ಸಂಸ್ಥೆಯು ಟಿಕೆಟ್ ಮೊತ್ತವನ್ನು ಹಿಂತಿರುಗಿಸಲಿಲ್ಲ. ಶನಿವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಲಯನ್ಸ್ ಏರ್ ಕೌಂಟರ್ನಲ್ಲಿ ತುಂಬಾ ಕೆಟ್ಟ ಅನುಭವ ಆಯಿತು' ಎಂದು ಅಳಲು ತೋಡಿಕೊಂಡಿದ್ದಾರೆ.