ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆಯ ಆರಂಭದಿಂದಲೂ ಎಲ್ಲಾ ಸುತ್ತಿನಲ್ಲೂ ವಿಪಕ್ಷ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗಿಂತ ಮುನ್ನಡೆ ಸಾಧಿಸುತ್ತಾ ಬಂದಿದ್ದ ದ್ರೌಪದಿ ಮುರ್ಮು, ಮೂರನೇ ಎರಡರಷ್ಟು ಬಹುಮತ ಪಡೆಯುವುದರೊಂದಿಗೆ ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. 17 ಪ್ರತಿಪಕ್ಷಗಳ ಸಂಸದರು ಅಡ್ಡ ಮತದಾನ ಮಾಡುವುದರೊಂದಿಗೆ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿರುವುದಾಗಿ ಮೂಲಗಳು ತಿಳಿಸಿವೆ.
ಎಲ್ಲಾ ಮತಗಳ ಎಣಿಕೆ ಮುಗಿದ ನಂತರ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳುವ ಸಾಧ್ಯತೆಯಿದೆ. ಆದರೆ, ಈಗಾಗಲೇ ಅವರು 5,77,777 ಮತಗಳನ್ನು ಪಡೆದಿದ್ದಾರೆ. ಇದು ಜುಲೈ 18 ರಂದು ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮೌಲ್ಯದಲ್ಲಿಅರ್ಧಕ್ಕಿಂತಲೂ ಹೆಚ್ಚಾಗಿದೆ.
ಒಟ್ಟಾರೇ ಮಾನ್ಯಗೊಂಡ ಮತಗಳಲ್ಲಿ ಶೇ. 53 ರಷ್ಟು ಮತಗಳನ್ನು ಮುರ್ಮು ಈಗಾಗಲೇ ಪಡೆದಿರುವುದಾಗಿ ಚುನಾವಣಾಧಿಕಾರಿ ಪಿ.ಸಿ. ಮೋದಿ ಘೋಷಿಸಿದ್ದಾರೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬ್ಯಾಲೆಟ್ ಗಳನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.