ಭುವನೇಶ್ವರ: ಒಡಿಶಾದ ಬುಡಕಟ್ಟು ಪ್ರಾಬಲ್ಯದ ಮಯೂರಭಂಜ್ ಜಿಲ್ಲೆಯ 60 ಜನರಿಗೆ ಅದು ಕನಸು ನನಸಾದ ಘಳಿಗೆಯಾಗಿತ್ತು. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ರಾಷ್ಟ್ರಪತಿ ಭವನದಲ್ಲಿ ಔತಣವನ್ನು ಸವಿಯುವ ಅದೃಷ್ಟ ಅವರದಾಗಿತ್ತು.
ದೇಶದ ಮೊದಲ ಆದಿವಾಸಿ ರಾಷ್ಟ್ರಪತಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ದಿಲ್ಲಿಗೆ ಆಹ್ವಾನಿಸಲ್ಪಟ್ಟಿದ್ದ ಈ 60 ಜನರಿಗೆ ತಮ್ಮ 'ನೆಲದ ಪುತ್ರಿ' ಆಯೋಜಿಸಿರುವ ಔತಣ ಕೂಟದಲ್ಲಿ ಭಾಗಿಯಾಗುವಂತೆ ಅಧಿಕಾರಿಗಳು ಆಗ್ರಹಿಸಿದಾಗ ಸಂಭ್ರಮದ ಅಚ್ಚರಿಯುಂಟಾಗಿತ್ತು.
'ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದು ನಮಗೆ ತುಂಬ ಹರ್ಷವನ್ನುಂಟು ಮಾಡಿತ್ತು,ಆದರೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟಕ್ಕಾಗಿ ನಮ್ಮನ್ನು ಆಹ್ವಾನಿಸಲಾಗುತ್ತದೆ ಎಂಬ ಕಲ್ಪನೆಯನ್ನೂ ನಾವು ಮಾಡಿರಲಿಲ್ಲ ' ಮಯೂರಭಂಜ್ ಜಿಲ್ಲಾ ಪರಿಷದ್ನ ಮಾಜಿ ಅಧ್ಯಕ್ಷೆ ಸುಜಾತಾ ಮುರ್ಮು ಹೇಳಿದರು.
ಸುಜಾತಾ ಮತ್ತು ಇತರ ಕೆಲವು ಮಹಿಳಾ ಅತಿಥಿಗಳು ಸಂತಾಲ್ ಸಾಂಪ್ರದಾಯಿಕ ಸೀರೆಯನ್ನು ಧರಿಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಗಯಾಮಣಿ ಬೆಶ್ರಾ ಮತ್ತು ಡಾಂಗಿ ಮುರ್ಮು ಅವರೂ ಇಂತಹುದೇ ಅನುಭವವನ್ನು ಹಂಚಿಕೊಂಡರು. ಅವರಿಬ್ಬರೂ ಸುದೀರ್ಘ ಸಮಯದಿಂದ ರಾಷ್ಟ್ರಪತಿಗಳ ಆಪ್ತರಾಗಿದ್ದು,ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿತರಾಗಿದ್ದರು. ರಾಷ್ಟ್ರಪತಿಗಳು ತಮ್ಮನ್ನು ಔತಣ ಕೂಟಕ್ಕೆ ಆಹ್ವಾನಿಸುತ್ತಾರೆ ಎಂದು ಅವರೂ ನಿರೀಕ್ಷಿಸಿರಲಿಲ್ಲ.
ಮುರ್ಮು ಅವರ ತವರು ಜಿಲ್ಲೆಯ ಅತಿಥಿಗಳಿಗೆ
ರಾಷ್ಟ್ರಪತಿ ಭವನದ ಸಂಪೂರ್ಣ ದರ್ಶನವನ್ನು ಮಾಡಿಸುವುದರ ಜೊತೆಗೆ ರಾಷ್ಟ್ರಪತಿಗಳ
ಕಚೇರಿಯನ್ನೂ ತೋರಿಸಲಾಗಿತ್ತು.ರಾಷ್ಟ್ರಪತಿ ಭವನದಿಂದ ನಿರ್ಗಮಿಸುವಾಗ ಎಲ್ಲ ಅತಿಥಿಗಳಿಗೆ
ಸಿಹಿ ಪೊಟ್ಟಣಗಳನ್ನು ನೀಡಲಾಗಿತ್ತು ಎಂದು ಹೇಳಿದ ಸುಜಾತಾ ಮುರ್ಮು, ಅದೊಂದು ಸ್ಮರಣೀಯ
ಅನುಭವವಾಗಿತ್ತು ಎಂದು ತಿಳಿಸಿದರು.
ಊಟದ ಮೆನು ಕುರಿತಂತೆ ಈ
ಅತಿಥಿಗಳು,ರಾಷ್ಟ್ರಪತಿಗಳು ಮಾಂಸಾಹಾರವನ್ನು,ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸಹ
ತಿನ್ನುವುದಿಲ್ಲ, ಹೀಗಾಗಿ ಅದು ಶುದ್ಧ ಸಸ್ಯಾಹಾರಿ ಔತಣಕೂಟವಾಗಿತ್ತು ಎಂದು ತಿಳಿಸಿದರು.
ರಾಷ್ಟ್ರಪತಿ ಭವನದಲ್ಲಿ ಮೊಬೈಲ್ ಫೋನ್ಗಳು ಮತ್ತು ಕ್ಯಾಮೆರಾಗಳನ್ನು ಒಯ್ಯಲು ಅವಕಾಶವಿಲ್ಲದ್ದರಿಂದ ತಮಗೆ ರಾಷ್ಟ್ರಪತಿಗಳೊಂದಿಗೆ ಸೆಲ್ಫಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕೆಲವರು ಬೇಸರಿಸಿದರು.