ಕಾಸರಗೋಡು: ಅಜನೂರು ಗ್ರಾ.ಪಂ.ಸಿಡಿಎಸ್ ವತಿಯಿಂದ ಮಡಿಯನ್ ಪ್ರದೇಶದ ಭತ್ತದ ಗದ್ದೆಯಲ್ಲಿ ಮಳೆ ಉತ್ಸವ ನಡೆಯಿತು. 'ಕೆಸರಿನಿಂದ ಅನ್ನ' ಪರಿಕಲ್ಪನೆಯೊಂದಿಗೆ ಕೃಷಿ ವಿಪುಲೀಕರಣ ಅಭಿಯಾನ ಅಂಗವಾಗಿ ಗದ್ದೆಯಲ್ಲಿ ಮಳೆ ಉತ್ಸವ ಆಯೋಜಿಸಲಾಗಿತ್ತು. ಕಾಞಂಗಾಡ್ ಡಿವೈಎಸ್ಪಿ ಡಾ.ವಿ. ಬಾಲಕೃಷ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭತ್ತದ ಬಯಲಿನ ಕೆಸರಲ್ಲಿ ಶ್ರಮವಹಿಸಿ ನಡೆಸುವ ಕೆಲಸದಿಂದ ನಮಗಿಂದು ತುತ್ತಿನ ಚೀಲ ತುಂಬಲು ಸಾಧ್ಯವಾಗುತ್ತಿದೆ. ಮುಂದಿನ ತಲೆಮಾರನ್ನು ಕೃಷಿಯೆಡೆಗೆ ಆಕರ್ಷಿಸುವ ಕೆಲಸ ನಡೆಯಬೇಕಾಗಿದೆ ಎಂದು ತಿಳಿಸಿದರು.
ಅಜನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕುಟುಂಬಶ್ರೀ ಸದಸ್ಯರ ಎಸ್ಸೆಸೆಲ್ಸಿ ಮತ್ತು ಪ್ಲಸ್ಟು ತರಗತಿಯಲ್ಲಿ ಪೂರ್ಣ ಪ್ರಮಾಣದ ಎ ಪ್ಲಸ್ ಪಡೆದ ಮಕ್ಕಳಿಗೆ ಪಂಚಾಯಿತಿ ವತಿಯಿಂದ ನಗದು ಪುರಸ್ಕಾರ ವಿತರಿಸಲಾಯಿತು. ಉಪಾಧ್ಯಕ್ಷ ಕೆ. ಸಬೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಮೀನಾ, ಕೆ. ಕೃಷ್ಣನ್ ಮಾಸ್ಟರ್, ಬ್ಲಾಕ್ ಪಂಚಾಯಿತಿ ಸದಸ್ಯರಾದ ಎ.ದಾಮೋದರನ್, ಲಕ್ಷ್ಮೀ ತ್ಯಾಂಪನ್, ಗ್ರಾಮ ಪಂಚಾಯಿತಿ ಸದಸ್ಯೆ ಕೆ. ಮಧು, ಕೃಷಿ ಅಧಿಕಾರಿ ಸಂತೋಷ್ ಎಂ.ಚಾಲಿಲ್, ಹಸಿರು ಮಿಷನ್ ಜಿಲ್ಲಾ ಸಂಯೋಜಕ ಪಿ.ಸುಬ್ರಮಣ್ಯಂ, ಮೂಲಕಂಡಂ ಪ್ರಭಾಕರನ್, ಪಿ.ವಿ.ಸುರೇಶ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ಸಿ.ಕುಞËಮಿನ ಸ್ವಾಗತಿಸಿದರು. ಸಿಡಿಎಸ್ ಅಧ್ಯಕ್ಷೆ ರತ್ನಾ ಕುಮಾರಿ ವಂದಿಸಿದರು. ಬಿರುಸಿನ ಮಳೆಯಿಂದ ಜಲಾವೃತವಾದ ಗದ್ದೆಗಳಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ತಿರುವಾತಿರ ಏರ್ಪಡಿಸಲಾಗಿತ್ತು. ಸುರಿಯುವ ಮಳೆಯನ್ನೂ ಲೆಕ್ಕಿಸದೆ, ಮಹಿಳೆಯರು, ಮಕ್ಕಳು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.