ಕಾಸರಗೋಡು: ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯಲ್ಲಿ ರೈಲು ಬುಡಮೇಲುಗೊಳಿಸುವ ಕೃತ್ಯಕ್ಕೆ ಗೂಢಾಲೋಚನೆಯೊಂದು ನಡೆಯುತ್ತಿದ್ದು, ಈ ಬಗ್ಗೆ ರೈಲ್ವೆ ಭದ್ರತಾ ಪಡೆ(ಆರ್ಪಿಎಫ್)ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆಗೆ ಮುಂದಾಗಿದೆ. ಆರ್ಪಿಎಫ್ ಇಂಟೆಲಿಜೆನ್ಸ್ ವಿಭಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆಗೆ ಮುಂದಾಗಿದೆ. ಅವಳಿ ಜಿಲ್ಲೆಗಳ ಒಟ್ಟು ಏಳು ಕೇಂದ್ರಗಳಲ್ಲಿ ರೈಲು ಹಳಿಯ ಮೇಲೆ ಕಗ್ಗಲ್ಲು ಇರಿಸಿ, ರೈಲು ಹಳಿ ತಪ್ಪಿಸುವ ಮೂಲಕ ಭಾರಿ ಪ್ರಮಾಣದ ಸಾವುನೋವು ಉಂಟಾಗುವಂತೆ ಮಾಡಲು ಸಂಚು ರೂಪಿಸಿದೆಯೆನ್ನಲಾಗಿದೆ.
ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯ ಉಪ್ಪಳ ಸನಿಹದ ಮುಟ್ಟಂ ಗೇಟ್, ಕೋಟಿಕುಳಂ, ಕಣ್ಣಾಪುರಂ, ಕಣ್ಣೂರ್ ಸೌತ್ವಳಪಟ್ಟಣಂ ಹಾಗೂ ಪಾಪಿನಶ್ಯೇರಿಯಲ್ಲಿ ರೈಲ್ವೆ ಹಳಿಯಲ್ಲಿ ಕಗ್ಗಲ್ಲು ಇರಿಸಿ ರೈಲು ಹಳಿ ತಪ್ಪಿಸುವ ಯತ್ನ ನಡೆಸಲಾಗಿದೆ. ಉಪ್ಪಳ ಸನಿಹದ ಮುಟ್ಟಂ ಗೇಟ್ ಬಳಿ ಜುಲೈ 17ರಂದು ಹಳಿಯಲ್ಲಿ ಬೃಹತ್ ಕಲ್ಲನ್ನಿರಿಸಲಾಗಿದ್ದು, ಮಂಗಳೂರು-ಚೆನ್ನೈ ಮೈಲ್ ಎಕ್ಸ್ಪ್ರೆಸ್ ರೈಲಿನ ಲೊಕೋ ಪೈಲಟ್ನ ಕರ್ತವ್ಯಪ್ರಜ್ಞೆಯಿಂದ ಕಲ್ಲು ತೆರವುಗೊಳಿಸುವ ಮೂಲಕ ಸಂಭಾವ್ಯ ದುರಂತ ತಪ್ಪಿತ್ತು. ಈ ಬಗ್ಗೆ ರೈಲ್ವೆ ಇಲಾಖೆ ಸಈನಿಯನರ್ ಇಂಜಿನಿಯರ್ ರಂಜಿತ್ ಕುಮಾರ್ ಅವರ ದಊರಿನ ಹಿನ್ನೆಲೆಯಲ್ಲಿ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಹಲವು ಬಾರಿ ರಾತ್ರಿ ಮರೆಯಲ್ಲಿ ರೈಲಿಗೆ ಕಲ್ಲು ತುರಾಟ, ಹಳಿಯಲ್ಲಿ ಕಲ್ಲು, ಕಬ್ಬಿಣದ ವಸ್ತುಗಳನ್ನು ಇರಿಸುವ ಕೃತ್ಯ ನಡೆದಿತ್ತು. ಕೃತ್ಯದ ಹಿಂದೆ ಉಗ್ರಗಾಮಿಗಳ ಕೈವಾಡವಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.