ಕೊಚ್ಚಿ: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಸುಮಾರು ಐದು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಕ್ಕಾಗಿ ಕೇರಳದ ನಟಿ ಹಾಗೂ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಟಿ ಅಶ್ವಥಿ ಬಾಬು ಮತ್ತು ಆಕೆಯ ಸ್ನೇಹಿತ ನೌಫಲ್ ಎಂದು ಗುರುತಿಸಲಾಗಿದೆ.
ಇಬ್ಬರು ಕೂಡ ಕಾಕನಾಡ ಮೂಲದವರು. ನಿನ್ನೆ (ಜುಲೈ 26) ಸಂಜೆ 6.30ರ ಸುಮಾರಿಗೆ ಅಲುವಾದ ಮುತ್ತೊಮ್ನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಸಿಯುಎಸ್ಎಟಿ ಜಂಕ್ಷನ್ನಿಂದ ಥ್ರಿಕ್ಕಕ್ಕರ ದೇವಸ್ಥಾನದವರೆಗೂ ಅಶ್ವಥಿ ಸ್ನೇಹಿತ ನೌಫಲ್ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಅಪಾಯಕಾರಿ ಕಾರು ಚಾಲನೆಯ ಪರಿಣಾಮ ನಾಲ್ಕು ದ್ವಿಚಕ್ರ ವಾಹನ ಮತ್ತು ಒಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದರೂ ಕಾರು ನಿಲ್ಲಿಸದ ಕಾರಣ ಬೇರೆ ವಾಹನಗಳು ಕಾರಿನ ಹಿಂದೆ ಹೋಗಿವೆ. ವಾಹನವೊಂದು ಕಾರನ್ನು ತಡೆದರೂ ನೌಫಲ್, ಕಾರನ್ನು ರಸ್ತೆಯ ಇನ್ನೊಂದು ಬದಿಯಲ್ಲಿ ತೆಗೆದುಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ, ಕಾರಿನ ಟೈರ್ ಒಡೆದಿದೆ. ಅಲ್ಲದೆ, ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ನಿಂತಿದೆ.
ಕಾರು ನಿಲ್ಲುತ್ತಿದ್ದಂತೆ ಜನರು ಅಶ್ವಥಿ ಮತ್ತು ನೌಫಲ್ ಸುತ್ತ ಸುತ್ತುವರಿದರು. ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದಾದರೂ ಸಾಧ್ಯವಾಗಲಿಲ್ಲ. ಕೊನೆಗೆ ಅವರನ್ನು ಪೊಲೀಸರಿಗೆ ಒಪ್ಪಿಸಲಾಯಿತು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನೌಫಲ್ ಕಂಠಪೂರ್ತಿ ಕುಡಿದು
ಅಮಲಿನಲ್ಲಿದ್ದ ಎಂದು ತಿಳಿದುಬಂದಿದೆ. ಅಂದಹಾಗೆ ಅಶ್ವಥಿ ಬಾಬು ಥುಂಬಾದಲ್ಲಿರುವ ಅರಟ್ಟುವಾಯಿ ಮೂಲದವರು. 2018ರಲ್ಲಿ ಡ್ರಗ್ಸ್ ಪ್ರಕರಣವೊಂದರಲ್ಲಿ ಅವರನ್ನು ಬಂಧಿಲಾಗಿತ್ತು.