ಕಾಸರಗೋಡು: ಬೆಂಗಳೂರಿನಲ್ಲಿ ಪತ್ರಕರ್ತೆ ಶ್ರುತಿನಾರಾಯಣನ್ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಕಾಸರಗೋಡು ಜಿಲ್ಲಾ ಘಟಕದ ಮಹಾಸಭೆ ಸರ್ಕಾರವನ್ನು ಆಗ್ರಹಿಸಿದೆ. ಶ್ರುತಿ ಅವರ ಕೊಠಡಿಯಿಂದ ಲಭಿಸಿದ ಪತ್ರದಲ್ಲಿ ಪತಿಯ ಕಿರುಕುಳದ ಬಗ್ಗೆ ಉಲ್ಲೇಖಿಸಿರುವುದರಿಂದ ಇವರ ಪತಿಯನ್ನು ಸಮಗ್ರ ತನಿಖೆಗೊಳಪಡಿಸುವಂತೆ ಒತ್ತಾಯಿಸಲಾಯಿತು.
ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ನಡೆದ ಮಹಾಸಭೆಯಲ್ಲಿ ಪ್ರೆಸ್ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ವಿ ಪದ್ಮೇಶ್ ವರದಿ ಮಂಡಿಸಿದರು. ಹಿರಿಯ ಪತ್ರಕರ್ತರಾದ ಅಬ್ದುಲ್ ರಹಮಾನ್ ಆಲೂರ್, ಜಯಕೃಷ್ಣನ್ ನರಿಕುಟ್ಟಿ, ವಿನೋದ್ ಪಾಯಂ, ರವಿ ನಾಯ್ಕಾಪು, ಗಂಗಾಧರ ತೆಕ್ಕೆಮೂಲೆ, ಶೆಫಿಕ್ ನಸ್ರುಲ್ಲ, ರವೀಂದ್ರನ್ ರಾವಣೇಶ್ವರ, ಸುಬ್ಬಣ್ಣ ಆಳ್ವ, ಚಂದ್ರಮೋಹನ್, ಸನ್ನಿಜೋಸೆಫ್ ಉಪಸ್ಥಿತರಿದ್ದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಅಧ್ಯಕ್ಷ ಮಹಮ್ಮದ್ ಹಾಶಿಂ(ದೇಶಾಭಿಮಾನಿ) ಕಾರ್ಯದರ್ಶಿ ಕೆ.ವಿ ಪದ್ಮೇಶ್(ಜನಯುಗಂ), ಉಪಾಧ್ಯಕ್ಷ ನಹಾಸ್ ಮಹಮ್ಮದ್(ಮಲಯಾಳ ಮನೋರಮ), ಜೊತೆ ಕಾರ್ಯದರ್ಶಿ ಜಿ.ಎನ್ ಪ್ರದೀಪ್(ಫ್ರೀಲಾನ್ಸ್), ಕೋಶಾಧಿಕಾರಿ ಶೈಜು ಪಿಲಾತ್ತರ(ಕೈರಳಿ ಟಿವಿ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ಲಕುಞÂ ಉದುಮ(ಚಂದ್ರಿಕ), ಮೆಲ್ಬಿ ಜೋಸೆಫ್(ಮನೋರಮಾ ನ್ಯೂಸ್), ಪುರುಷೋತ್ತಮ ಪೆರ್ಲ(ವಿಜಯವಾಣಿ), ರವೀಂದ್ರನ್ ರಾವಣೇಶ್ವರ(ಮಾಧ್ಯಮ)ಅಧಿಕಾರ ಸ್ವೀಕರಿಸಿದರು. ಶೈಜು ಪಿಲಾತ್ತರ ವಂದಿಸಿದರು.