ಕಾಸರಗೋಡು: ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಪನತ್ತಡಿ ಗ್ರಾಮ ಪಂಚಾಯಿತಿಯಲ್ಲಿ ಹಲಸು ಹಬ್ಬ ಹಾಗೂ ಎಲೆ ತರಕಾರಿ ಸ್ಪರ್ಧೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಮೇಳ ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷ ಆರ್.ಸಿ. ರಜಿನಿದೇವಿ ಅಧ್ಯಕ್ಷತೆ ವಹಿಸಿದ್ದರು. ಮೇಳದಲ್ಲಿ ಹಲಸಿನ ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು. ಹಲಸಿನ ಹಣ್ಣನ್ನು ಜನಪ್ರಿಯಗೊಳಿಸುವುದು, ಹಲಸಿನ ಪೌಷ್ಟಿಕಾಂಶ ಮತ್ತು ಔಷಧೀಯ ಮೌಲ್ಯಗಳನ್ನು ತಿಳಿಯಪಡಿಸುವುದು ಮತ್ತು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಂಡುಕೊಳ್ಳುವ ಉದ್ದೇಶದಿಂದ ಹಲಸು ಮೇಳ ಆಯೋಜಿಸಲಾಗಿತ್ತು.
ಗ್ರಾಪಂ ಉಪಾಧ್ಯಕ್ಷ ಪಿ.ಎಂ.ಕುರಿಯಾಕೋಸ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯಾಶಿವದಾಸ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಕೆ.ವೇಣುಗೋಪಾಲ್, ವಿ.ವಿ.ಹರಿದಾಸ್, ಕೆ.ಎಸ್.ಪ್ರೀತಿ, ಕೆ.ಸೌಮ್ಯ ಮೋಲ್, ಎನ್.ಮಂಜುಷಾ, ರಾಧಾ ಸುಕುಮಾರನ್, ಸಹಾಯಕ ಕಾರ್ಯದರ್ಶಿ ಕೆ.ರವೀಂದ್ರನ್, ಸಿಡಿಎಸ್, ಎಡಿಎಸ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.