ಮಂಜೇಶ್ವರ: ಜನಸಹಭಾಗಿತ್ವವನ್ನು ಖಾತ್ರಿಪಡಿಸಿದಾಗ ಮಾತ್ರ ಯಾವುದೇ ಯೋಜನೆಗಳು ಫಲಪ್ರದವಾಗಲು ಸಾಧ್ಯ ಎಂದು ಮಾಜಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಅವರು ಮಂಜೇಶ್ವರ ಮೊರತ್ತಣೆಯ ಎ.ಎಚ್ ಪ್ಯಾಲೇಸ್ ಸಭಾಂಗಣದಲ್ಲಿ ಶನಿವಾರ ಮಂಜೇಶ್ವರಂ ಇನಿಶಿಯೇಟಿವ್ ಫಾರ್ ಲೋಕಲ್ ಎಂಪವರ್ಮೆಂಟ್ (ಮೈಲ್ಸ್) ಯೋಜನೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗ್ರಾಮಸಭೆಗಳು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಶಕ್ತಿಶಾಲಿ ಸಭೆಯಾಗಿದ್ದು, ಆಯಾ ಪ್ರದೇಶದ ಅಭಿವೃದ್ಧಿ ಯೋಜನೆಗಳ ಬಗ್ಗೆ ಗ್ರಾಮಸಭೆಗಳಲ್ಲಿ ಸಮಗ್ರ ಚರ್ಚೆಗೊಳಗಾಗಿ ಜಾರಿಗೊಳ್ಳುವಂತಾದಾಗ ಮಾತ್ರ ತಳಮಟ್ಟದ ಜನರನ್ನು ತಲುಪಲು ಸಾಧ್ಯ ಎಂದು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ರಮಿತ್ ಚೆನ್ನಿತ್ತಲ ಪ್ರಾಸ್ತಾವಿಕ ಭಾಷಣ ಮಾಡಿದರು. ಶಾಸಕ ಎ.ಕೆ.ಎಂ ಅಶ್ರಫ್, ಮಂಜೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಮೀನಾ ಟೀಚರ್, ಮೀಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ, ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಯೂಸುಫ್, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್. ಸೋಮಶೇಖರ, ವೋರ್ಕಾಡಿ ಗ್ರಾಪಂ ಅಧ್ಯಕ್ಷೆ ಎಸ್ ಭಾರತಿ, ಮಂಜೇಶ್ವರ ಗ್ರಾಪಂ ಅಧ್ಯಕ್ಷ ಜೀನ್ ಲೆವಿನೋ ಮೊಂತಾರೊ, ಪುತ್ತಿಗೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಆಳ್ವ, ಪೈವಳಿಕೆ ಗ್ರಾಪಂ ಅಧ್ಯಕ್ಷೆ ಕೆ.ಜಯಂತಿ, ಮಂಗಲ್ಪಾಡಿ ಗ್ರಾಪಂ ಪ್ರಭಾರ ಅಧ್ಯಕ್ಷ ಯೂಸುಫ್ ಹೇರೂರು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೋಲ್ಡನ್ ರಹಮಾನ್, ಜಮೀಲಾ ಸಿದ್ದಿಕ್, ಕಮಲಾಕ್ಷಿ, ನಾರಾಯಣ ನಾಯ್ಕ್ ಉಪಸ್ಥಿತರಿದ್ದರು.