ಕೊಚ್ಚಿ: ನೀಟ್ ಪರೀಕ್ಷೆಗೂ ಮುನ್ನ ಬಾಲಕಿಯರ ಒಳ ಉಡುಪನ್ನು ತೆಗೆದು ಪರಿಶೀಲನೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ತಿರುವನಂತಪುರ ಮೂಲದ ಆಸಿಫ್ ಆಜಾದ್ ಎಂಬುವರು ಅರ್ಜಿ ಸಲ್ಲಿಸಿದ್ದು, ಬಾಲಕಿಯರ ಮರು ಪರೀಕ್ಷೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ನ್ಯಾಯಾಲಯ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಲಿದೆ.
ದೇಶಾದ್ಯಂತ ಪರೀಕ್ಷೆಗೆ ಏಕರೂಪದ ಪ್ರೊಟೋಕಾಲ್ ಅನ್ನು ಅನ್ವಯಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನು ಅರ್ಜಿಯಲ್ಲಿ ಕೋರಲಾಗಿದೆ. ಪರೀಕ್ಷೆಗೂ ಮುನ್ನ ನಡೆಸುವ ದೈಹಿಕ ಪರೀಕ್ಷೆಯು ಮಕ್ಕಳನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸುತ್ತದೆ, ಇದು ನೆನಪಿನ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 18 ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ಚಾತಮಂಗಲಂ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಯಲ್ಲಿ ಇಬ್ಬರು ಶಿಕ್ಷಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಬಾಲಕಿಯರ ಒಳಉಡುಪುಗಳನ್ನು ಬಲವಂತವಾಗಿ ಬಿಚ್ಚಿಸಿ ನಂತರ ಮಕ್ಕಳನ್ನು ಪರೀಕ್ಷೆಗೆ ಹುಡುಗರೊಂದಿಗೆ ಕೂರಿಸಲಾಗಿದೆ ಎಂದು ಪೋಷಕರು ದೂರಿದ್ದರು. ಪುರುಷ ಶಿಕ್ಷಕರ ಮುಂದೆ ಆ ಸ್ಥಿತಿಯಲ್ಲಿ ಕುಳಿತು ಪರೀಕ್ಷೆ ಬರೆಯಬೇಕಾಗಿರುವುದು ಬಾಲಕಿಯರ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪೋಷಕರು ಆರೋಪಿಸಿದ್ದಾರೆ. ಕೊಲ್ಲಂ ಜಿಲ್ಲೆಯ ಆಯುರ್ ಮಾರ್ಥೋಮ್ಮ ಕಾಲೇಜಿನಲ್ಲಿ ಈ ವಿವಾದಾತ್ಮಕ ಘಟನೆ ನಡೆದಿತ್ತು.
ನೀಟ್ ವಿವಾದಕ್ಕೆ ಸಂಬಂಧಿಸಿ ಕೇರಳ ಹೈಕೋರ್ಟ್ನಲ್ಲಿ ಮನವಿ
0
July 28, 2022
Tags