ರಾತ್ರಿಕಾಲದ ಆನ್ಲೈನ್ ರಿವ್ಯೂ ಕೊನೆಗೊಳಿಸಬೇಕು ಕೆ. ಪಿ.ಎಸ್. ಟಿ. ಎ: ಉಪಜಿಲ್ಲಾ ಶಿಕ್ಷಣಾಧಿಕಾರಿ ಕಛೇರಿ ಮುಂದೆ ಧರಣಿ
0
July 28, 2022
ಉಪ್ಪಳ: ಶಾಲಾ ತರಗತಿ ಸಮಯದ ಬಳಿಕವೂ ಆನ್ಲೈನ್ ರಿವ್ಯೂ ಎಂಬ ಹೆಸರಿನಲ್ಲಿ ಬಿ.ಆರ್.ಸಿಗಳು ನಡೆಸುವ ಅವಲೋಕನ ಸಭೆಗಳನ್ನು ಕೊನೆಗೊಳ್ಳಿಸಬೇಕೆಂದು ಕೆ. ಪಿ.ಎಸ್. ಟಿ. ಎ ಮಂಜೇಶ್ವರ ಉಪಜಿಲ್ಲಾ ಸಮಿತಿ ಒತ್ತಾಯಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಒಪ್ಪಿಗೆ ಇದ್ದೋ ಇಲ್ಲದೆಯೂ ಬಿ.ಆರ್.ಸಿ ಯ ಕೆಲವು ಉದ್ಯೋಗಸ್ಥರು ನಡೆಸುವ ಇಂತಹ ಕಾರ್ಯಕ್ರಮಗಳು ಅಧ್ಯಾಪಕರ ವೈಯಕ್ತಿಕ - ಕೌಟುಂಬಿಕ ಜೀವನದೆಡೆಗಿರುವ ಹೇರಿಕೆಯಾಗಿದೆ. ಪ್ರತ್ಯೇಕವಾಗಿ ಅಧ್ಯಾಪಿಕೆಯರು ರಾತ್ರಿ ಸಮಯಗಳಲ್ಲಿ ಮನೆಕೆಲಸಗಳಲ್ಲಿ ತೊಡಗಿಕೊಂಡಿರುವಾಗ ಇದು ಕುಟುಂಬ ಜೀವನಕ್ಕೆ ಅಡ್ಡಿಯಾಗುವುದು. ಮಂಜೇಶ್ವರ ಬಿ.ಆರ್.ಸಿ ಯಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ಇಲ್ಲವೆಂದು ಕೆ. ಪಿ.ಎಸ್.ಟಿ. ಎ ತಿಳಿಸಿದೆ.
ಈ ನಿಟ್ಟಿನಲ್ಲಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಕಛೇರಿ ಮುಂದೆ ಕೆ. ಪಿ.ಎಸ್. ಟಿ ಎ ನಡೆಸಿದ ಧರಣಿಯ ಅಧ್ಯಕ್ಷತೆಯನ್ನು ಉಪಜಿಲ್ಲಾ ಅಧ್ಯಕ್ಷ ಜಬ್ಬಾರ್ ಬಿ ವಹಿಸಿದ್ದರು.
ಜಿಲ್ಲಾ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಕೆ ಉದ್ಘಾಟಿಸಿದರು. "ಮಧ್ಯಾಹ್ನದ ಊಟದ ಬಾಕಿ ಇರುವ ಮೊತ್ತವನ್ನು ಕೂಡಲೇ ಮಂಜೂರು ಮಾಡಬೇಕು, ಊಟಕ್ಕೆ ನೀಡುವ ಮೊತ್ತವನ್ನು ಹೆಚ್ಚಿಸಬೇಕು, ಅಡುಗೆ ಕಾರ್ಮಿಕರ ವೇತನವನ್ನು ಹೆಚ್ಚಿಸಬೇಕು" ಮುಂತಾದ ಬೀಡಿಕೆಗಳನ್ನಿಟ್ಟು ಕೆ. ಪಿ.ಎಸ್. ಟಿ.ಎ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತತ್ವದಲ್ಲಿ ಧರಣಿ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಗೆಜೆಟೆಡ್ ಆಫೀಸರ್ ಸಂಘಟನೆಯ ನೇತಾರರಾದ ಕೆ.ಸಿ ಬಿಜು ಅವರು ಮಾತನಾಡಿದರು. ಕೆ. ಪಿ.ಎಸ್. ಟಿ. ಎ ಜಿಲ್ಲಾ ಜೊತೆ ಕಾರ್ಯದರ್ಶಿ ಜನಾರ್ಧನನ್ , ಕೆ.ವಿ ರಾಧಾಕೃಷ್ಣನ್ ಆರ್, ಶ್ರೀನಿವಾಸ ಕೆ. ಎಚ್, ಮುಖ್ಯೋಪಾಧ್ಯಾಯರುಗಳಾದ ಸುರೇಂದ್ರನ್ ಚೀಮೇನಿ, ಪ್ರಕಾಶನ್ ನಂಬೂದಿರಿ, ರಂಜಿತ್ ಕುಮಾರ್ ಐತಾಳ ಶುಭಾಶಂಸನೆಗೈದರು. ಕೆ. ಪಿ.ಎಸ್.ಟಿ. ಎ ಉಪಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ತರ್ ಸ್ವಾಗತಿಸಿ, ವಿದ್ಯಾಭ್ಯಾಸ ಜಿಲ್ಲಾ ಕೋಶಾಧಿಕಾರಿ ವಿಮಲ್ ಅಡಿಯೋಡಿ ವಂದಿಸಿದರು.