ಕಾಸರಗೋಡು: ಭೂಕಂಪ ಉಂಟಾಗಿರುವ ಪನತ್ತಡಿ ಪಂಚಾಯಿತಿಯ ಕಲ್ಲಪಳ್ಳಿ, ಕಮ್ಮಾಡಿ, ಬಟೋಳಿ, ಬಳಾಲ್ ಪಂಚಾಯಿತಿ ಮಾಲೋಮ್ ಮತ್ತು ಕೊನ್ನಕ್ಕಾಡಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಜ್ಞರ ತಂಡವು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ (ವಿಪತ್ತು ನಿರ್ವಹಣೆ) ಡಾ.ಎಚ್. ವಿಜಿತ್ ನೇತೃತ್ವ ವಹಿಸಿದ್ದರು. ಲಘು ಭೂಕಂಪದ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಈ ಪ್ರದೇಶದಲ್ಲಿ ಉಂಟಾಗಿರುವ ಭೂಮಿಯ ಕಂಪಿಸುವಿಕೆ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವಿವರವಾದ ವರದಿ ಸಲ್ಲಿಸಲಾಗುವುದು ಎಂದು ಡಾ. ವಿಜಿತ್ ಮಾಹಿತಿ ನೀಡಿದರು.
ಪಣತ್ತಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಪ್ರಸಾದ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಪಾಯ ವಿಶ್ಲೇಷಕ ಪ್ರೇಮ್ ಜಿ ಪ್ರಕಾಶ್, ಪಂಚಾಯಿತಿ ಉಪಾಧ್ಯಕ್ಷ ಪಿ.ಎಂ.ಕುರಿಯಾಕೋಸ್, ಗ್ರಾಮ ಪಂಚಾಯಿತಿ ಸದಸ್ಯ, ವಕೀಲ ರಾಧಾಕೃಷ್ಣ, ಪರಪ್ಪ ಬ್ಲಾಕ್ ಪಂಚಾಯಿತಿ ಸದಸ್ಯ ಅರುಣ್ ರಂಗತುಮಲ, ಪನತ್ತಡಿ ವಿಶೇಷ ಗ್ರಾಮಾಧಿಕಾರಿ ಸನಿಲ್ ಥಾಮಸ್, ಪಂಚಾಯಿತಿ ನೌಕರರಾದ ಮನೋಜ್, ವಿಷ್ಣು, ಕಮ್ಮಾಡಿ ಊರುಮೂಪ್ಪನ್ ಬೆಳ್ಳಿಯಪ್ಪ ಮತ್ತಿತರರು ತಂಡದ ಜತೆಗಿದ್ದರು.