ಕಾಸರಗೋಡು: ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಬದಿಯಡ್ಕ ಪಂಚಾಯಿತಿಯ 14ನೇ ಪಟ್ಟಾಜೆ ವಾರ್ಡಿಗೆ ನಡೆದ ತ್ರಿಕೋನ ಸ್ಪರ್ಧೆಯಲ್ಲಿ ಐಕ್ಯರಂಗದ ಅಭ್ಯರ್ಥಿ ಶ್ಯಾಮ ಪ್ರಸಾದ್ ಮಾನ್ಯ(427ಮತ) ಗೆಲುವು ಸಾಧಿಸಿದ್ದಾರೆ. ಇವರು ತಮ್ಮ ಸಮೀಪ ಸ್ಪರ್ಧಿ ಮಹೇಶ್ ವಳಕುಂಜ ಅವರನ್ನು 38ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಸಿಪಿಎಂನಿಂದ ಸ್ಪರ್ಧಿಸಿದ್ದ ಎಂ. ಮದನ 199ಮತ ಗಳಿಸಿದ್ದಾರೆ. ಕುಂಬಳೆ ಪಂಚಾಯಿತಿ 14ನೇ ಪೆರುವಾಡ್ ವಾರ್ಡಿನಲ್ಲಿ ಸಿಪಿಎಂನ ಅನಿಲ್ ಕುಮಾರ್ ಗೆಲುವು ಸಾಧಿಸಿದ್ದಾರೆ.
ಕಾಞಂಗಾಡ್ ನಗರಸಭಾ ಒಂದನೇ ತೋಯಮಾಲ್ ವಾರ್ಡ್ಗೆ ನಡೆದ ಚುನಾವಣೆಯಲ್ಲಿ ಎಡರಂಗದ ಇಂದಿರಾ(701ಮತ)ವಿಜೇತರಗಿದ್ದಾರೆ. ಇವರು ಸಮೀಪಸ್ಪರ್ಧಿ ಕಾಂಗ್ರೆಸ್ನ ನಾರಾಯಣಿ ಅವರನ್ನು 464ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಪಳ್ಳಿಕೆರೆ ಗ್ರಾಮ ಪಂಚಾಯಿತಿಯ 19ನೇ ವಾರ್ಡ್ ಪಲ್ಲಿಪುಳ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಮುಸ್ಲಿಂಲೀಗಿನ ಸಮೀರಾ ಅಬ್ಬಸ್(831)ವಿಜೇತರಾಗಿದ್ದಾರೆ. ಸ್ವತಂತ್ರ ಅಭ್ಯರ್ಥಿ ರಶೀದಾ 235ಮತಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿದ್ದಾರೆ. ಕಳ್ಳಾರ್ ಪಂಚಾಯಿತಿಯ ಎರಡನೇ ಅಡ್ಕ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸನ್ನಿ ಅಬ್ರಹಾಂ(441ಮತ)ವಿಜೇತರಾಗಿದ್ದಾರೆ. ಜಿಲ್ಲೆಯಲ್ಲಿ ಐದು ವಾರ್ಡುಗಳಿಗೆ ಉಪ ಚುನಾವಣೆ ನಡೆದಿತ್ತು.
ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ 20ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 10ರಲ್ಲಿ ಆಡಳಿತಾರೂಢ ಎಡರಂಗ, ಒಂಬತ್ತರಲ್ಲಿ ಐಕ್ಯರಂಗ ಹಾಗೂ ಒಂದರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಎಳಂಬೂರ್ ಆಲಮುಟ್ಟಿ ವಾರ್ಡಿನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.