ಬದಿಯಡ್ಕ: ಪೆರಡಾಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಅಸೆಂಬ್ಲಿ ನಡೆಯುತ್ತಿರುವಾಗ ಗಗನಯಾನಿ ಪೋಷಾಕಿನೊಂದಿಗೆ ಮೂವರು ಬಂದಿಳಿದರು. ಮಕ್ಕಳು ಅವರಲ್ಲಿ ಚಂದ್ರನ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸಂದರ್ಶನ ನಡೆಸಿದರು. ಅಲ್ಲಿನ ವಿಚಾರಗಳನ್ನು ತಿಳಿದುಕೊಂಡರು. ಚಿನ್ಮಯಕೃಷ್ಣ, ದ್ರಿತನ್, ತೇಜಸ್ ಈ ರೀತಿ ಚಂದ್ರಲೋಕ ಸಂಚಾರಿಗಳಾಗಿ ಆಗಮಿಸಿ ಅಚ್ಚರಿ ಮೂಡಿಸಿದರು.
ಪೆರಡಾಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಚಾಂದ್ರ ದಿನಾಚರಣೆಯನ್ನು ಮುಖ್ಯ ಶಿಕ್ಷಕ ರಾಜಗೋಪಾಲ್ ಅವರು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ, ಸದಸ್ಯ ಶರೀಫ್ ಶುಭಾಶಯಕೋರಿದರು. ಮಕ್ಕಳಿಂದ ಚಂದ್ರಯಾನದ ಕುರಿತು ಭಾಷಣ, ಹಾಡು, ಚಾರ್ಟ್ ಮತ್ತು ವಿಡಿಯೋ ಪ್ರದರ್ಶನ, ಚಿತ್ರ ರಚನೆ, ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.ಗೋಪಾಲ ಕೃಷ್ಣ ಭಟ್ ಸ್ವಾಗತಿಸಿ, ಶ್ರೀಧರ್ ಭಟ್ ವಂದಿಸಿದರು. ಶ್ರೀಧರನ್ ಕಾರ್ಯಕ್ರಮ ನಿರೂಪಿಸಿದರು. ಸಿಜಿ ತೋಮಸ್, ಜಯಲತಾ ಸಹಕರಿಸಿದರು.