ತಿರುವನಂತಪುರ: ಜಿಲ್ಲೆಯ ಹಿಂದುಳಿದಿರುವಿಕೆಯನ್ನು ಸರ್ಕಾರ ಮನಗಾಣಬೇಕಾದರೆ ಕಾಸರಗೋಡಿನಲ್ಲಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವಂತೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಕಾಲೇಜು(ಏಐಐಎಂಎಸ್)ಮಂಜೂರುಗೊಳಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಸಲ್ಲಿಸುವ ಪ್ರಸ್ತಾವನೆಯಲ್ಲಿ ಕಾಸರಗೋಡಿನ ಹೆಸರನ್ನೂ ಒಳಪಡಿಸುವಂತೆ ಆಗ್ರಹಿಸಿ ಎಂಡೋಸಲ್ಫಾನ್ ಸಂತ್ರಸ್ತರು ದೀರ್ಘ ಕಾಲದಿಂದ ಕಾಸರಗೋಡಿನಲ್ಲಿ ನಡೆಸುತ್ತಿರುವ ಹೋರಾಟದ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸಂದರ್ಭ ಈ ಪ್ರಸ್ತಾಪ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ವಿಧಾನಸಭಾ ಕಟ್ಟಡ ನಿರ್ಮಿಸಿರುವುದಲ್ಲದೆ, ಇಲ್ಲಿ ವಿಶೇಷ ಅಧಿವೇಶನ ನಡೆಸುತ್ತಿರುವ ವಿಷಯವನ್ನೂ ಕೇರಳ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಗಮನಸೆಳೆದಿದ್ದಾರೆ. ಇದೇ ರೀತಿ ಕಾಸರಗೋಡು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಹಾಗೂ ಇಲ್ಲಿನ ಬಹುಮುಖ್ಯ ಸಮಸ್ಯೆಯನ್ನು ಖುದ್ದಾಗಿ ಮನವರಿಕೆ ಮಾಡಿಕೊಳ್ಳಲು ಕಾಸರಗೋಡಿನಲ್ಲೂ ವಿಶೇಷ ಅಧಿವೇಶನ ಆಯೋಜಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.