ಕಾಸರಗೋಡು: ಕೇರಳದ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕೇರಳ ಗ್ರಾಮೀಣ ಬ್ಯಾಂಕ್ ನೌಕರರು ನಾನಾ ಬೇಡಿಕೆ ಮುಂದಿಟ್ಟುಕೊಂಡು ಮುಷ್ಕರ ತೀವ್ರಗೊಳ್ಳುತ್ತಿದ್ದು, ಜು.25ರಂದು ಬ್ಯಾಂಕುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು.
ಕೇರಳದಲ್ಲಿ 633 ಶಾಖೆಗಳು ಮತ್ತು 10 ಪ್ರಾದೇಶಿಕ ಕಚೇರಿಗಳನ್ನು ಹೊಂದಿರುವ ಬ್ಯಾಂಕ್ ಪ್ರಸ್ತುತ ಕೇವಲ 3300 ಉದ್ಯೋಗಿಗಳನ್ನು ಹೊಂದಿದೆ. ಗ್ರಾಮೀಣ ಬ್ಯಾಂಕ್ಗಳಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನು ನಿರ್ಧರಿಸುವ 'ಮಿತ್ರ ಮಾನವ ಶಕ್ತಿ' ಸಮಿತಿಯ ಶಿಫಾರಸಿನಂತೆ 800 ಹುದ್ದೆಗಳ ಪೈಕಿ ಹತ್ತನೇ ಒಂದು ಭಾಗಕ್ಕೆ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬ್ಯಾಂಕ್ ತಾನೇ ನಿರ್ಧರಿಸಬಹುದಾಗಿದ್ದ ವಿಚಾರದಲ್ಲಿ ಪ್ರಾಯೋಜಕ ಬ್ಯಾಂಕ್ ಆಘಿರುವ ಕೆನರಾ ಬ್ಯಾಂಕ್ ಮಧ್ಯಪ್ರವೇಶದಿಂದ ಖಾಲಿ ಹುದ್ದೆಯನ್ನು ಭರ್ತಿಗೊಳಿಸುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ನೌಕರರು ಆರೋಪಿಸಿದ್ದಾರೆ. ಮುಷ್ಕರದ ಅಂಗವಾಗಿ ಕಾಸರಗೋಡು ಜಿಲ್ಲೆಯ ಎಲ್ಲಾ ಶಾಖೆಗಳನ್ನು ಜು. 25ರಂದು ಮುಚ್ಚಲಾಗುವುದು. ಅಲ್ಲದೆ, ಪ್ರಾದೇಶಿಕ ಕಚೇರಿಯಿಂದ ಆರಂಭಿಸಿ ಲೀಡ್ ಬ್ಯಾಂಕ್ ವರೆಗೆ ರ್ಯಾಲಿಯನ್ನೂ ಆಯೋಜಿಸಲಾಗಿದೆ ಎಂದು ಜಂಟಿ ಮುಷ್ಕರ ಸಮಿತಿ ಮುಖಂಡರು ತಿಳಿಸಿದ್ದಾರೆ.