ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣದ ವಠಾರದಿಂದ ಸ್ಥಳಾಂತರಿಸಿ ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನೆಡಲಾದ ಮಾವಿನ ಮರ ಚಿಗುರಲಾರಂಭಿಸಿದೆ. ಕೇರಳದ ಖ್ಯಾತ ಕವಯಿತ್ರಿ ಎಂ. ಸುಗದ ಕುಮಾರಿ ಬಸ್ನಿಲ್ದಾಣ ವಠಾರದಲ್ಲಿ ನೆಟ್ಟಿರುವ 'ಪಯಸ್ವಿನಿ'ಹೆಸರಿನ ಈ ಮಾವಿನ ಮರವನ್ನು ಬೃಹತ್ ಜೆಸಿಬಿ ಹಾಗೂ ಕ್ರೇನ್ ಸಹಾಯದಿಂದ ಜೂ. 15ರಂದು 'ಆಪರೇಶನ್ ಪಯಸ್ವಿನಿ' ಮೂಲಕ ತೆರವುಗೊಳಿಸಿ ಶಾಲಾ ಮೈದಾನದಲ್ಲಿ ನೆಡಲಾಗಿತ್ತು.
2006ರಲ್ಲಿ ಸುಗದಕುಮಾರಿ ಅವರು ಕಾರ್ಯಕ್ರಮವೊಂದರಲ್ಲಿ ನೆನಪಿಗಾಗಿ ಮಾವಿನ ಸಸಿಯನ್ನು ನೆಟ್ಟು ಬೆಳೆಸಿದ್ದು, ಹಲವು ರೆಂಬೆಗಳಿಂದ ಬೆಳೆದು ನಿಂತ 16ವರ್ಷ ಪ್ರಾಯದ ಈ ಮರದ ದೊಡ್ಡ ಕೊಂಬೆಗಳನ್ನು ಕತ್ತರಿಸಿ ಶಿಲೀಂಧ್ರ ಸೋಂಕು ತಡೆಗಟ್ಟಲು ವಿಶೇಷ ಮಿಶ್ರಣವನ್ನು ಲೇಪಿಸುವ ಮೂಲಕ ಶಾಲಾ ವಠಾರದಲ್ಲಿ ನೆಡಲಾಗಿತ್ತು. ಸಾಮಾಜಿಕ ಅರಣ್ಯ ಇಲಾಖೆ ಉತ್ತರ ಪ್ರಾಂತ ಸಂರಕ್ಷಣಾಧಿಕಾರಿ ಆರ್.ಕೀರ್ತಿ ಅವರ ನೇತೃತ್ವದಲ್ಲಿ ಮರ ಸ್ಥಳಾಂತರ ಮತ್ತು ನೆಡುವ ಪ್ರಕ್ರಿಯೆ ನಡೆದಿದ್ದು, ಮರ ಚಿಗುರೊಡೆದಿರುವುದು ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಎಲ್ಲರ ಮೊಗದಲ್ಲೂ ಮಂದಹಾಸಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಗುತ್ತಿಗೆದಾರರಾದ ಉರಾಳುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ ಈ ಮರವನ್ನು ಸಂರಕ್ಷಿಸಿ ಅಡ್ಕತ್ತಬೈಲಿನ ಶಾಲಾ ಮೈದಾನಕ್ಕೆ ಸ್ಥಳಾಂತರಿಸುವ ಕೆಲಸ ನಡೆಸಿಕೊಟ್ಟಿತ್ತು.
ಚಿಗುರೊಡೆದ ಮಾವಿನ ಮರ: ವಿದ್ಯಾರ್ಥಿಗಳ ಮೊಗದಲ್ಲಿ ಮೂಡಿತು ಮಂದಹಾಸ
0
July 27, 2022