ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಆರೋಪಿಯನ್ನು ಬಂಧಿಸುವ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರವನ್ನು ಸುಪ್ರೀಂಕೋರ್ಟ್ ಬುಧವಾರ ಎತ್ತಿಹಿಡಿದಿದೆ.
ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದ ಪ್ರಕ್ರಿಯೆಯು ನಿರಂಕುಶವಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಪಿಎಂಎಲ್ಎ ಅಡಿಯಲ್ಲಿ ಅಕ್ರಮ ಹಣ ವರ್ಗಾವಣೆಯು ಒಂದು ಪ್ರತ್ಯೇಕ ಅಪರಾಧ ಎಂದು ಹೇಳಿದೆ.
ಶೋಧ ಕಾರ್ಯಾಚರಣೆ, ಆಸ್ತಿ ವಶ, ಬಂಧಿಸುವ ಅಧಿಕಾರ ಮತ್ತು ಜಾಮೀನು ಸೇರಿದಂತೆ ಪಿಎಂಎಲ್ಎ ಅಡಿಯಲ್ಲಿ ಬರುವ ಎಲ್ಲ ಕಠಿಣ ನಿಬಂಧನೆಗಳನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಪೂರ್ವಭಾವಿ ಅಪರಾಧದಲ್ಲಿ ಎಫ್ಐಆರ್ ದಾಖಲಿಸದಿದ್ದರೂ ಇಡಿ ವಿಚಾರಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿಆರ್ಪಿಸಿ ಅಡಿಯಲ್ಲಿ ಇಡಿ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಲ್ಲ. ಆದರೆ, ಇಡಿ ಅಧಿಕಾರಿಗಳ ಮುಂದೆ ರೆಕಾರ್ಡ್ ಆಗುವ ಹೇಳಿಕೆಗಳು ಕೂಡ ಸಾಕ್ಷಿಗಳಾಗಿ ಮಾನ್ಯವಾಗಿದೆ ಎಂದು ಉನ್ನತ ನ್ಯಾಯಾಲಯ ತಿಳಿಸಿದೆ.
ಇಡಿ ವಿರುದ್ಧ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಬಂಧನದ ಆಧಾರ ಅಥವಾ ಸಾಕ್ಷ್ಯವನ್ನು ತಿಳಿಸದೆ ಆರೋಪಿಗಳನ್ನು ಬಂಧಿಸುವ ಅನಿಯಂತ್ರಿತ ಅಧಿಕಾರವು ಅಸಂವಿಧಾನಿಕ ಎಂದು ವಾದಿಸಿದ್ದರು. ಅಲ್ಲದೆ, ಇಡಿ ವಿಚಾರಣೆ ವೇಳೆ ಬೆದರಿಕೆ ಹಾಕಿ ಆರೋಪಿಯಿಂದ ಬಲವಂತವಾಗಿ ದೋಷಾರೋಪಣೆ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿತ್ತು. ಆರೋಪಿಗಳ ಮೇಲೆ ಸಾಕ್ಷಿಯ ಹೊರೆ ಹಾಕುವುದು ಸಮಾನತೆಯ ಹಕ್ಕು ಮತ್ತು ಬದುಕುವ ಹಕ್ಕಿನಂತಹ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಕೇಂದ್ರದ ಪರ ವಾದ ಮಂಡನೆ ಮಾಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಕ್ರಮ ಹಣ ವರ್ಗಾವಣೆ ಅಪರಾಧಗಳ ಗಂಭೀರ ಸ್ವರೂಪ ಮತ್ತು ಅದನ್ನು ತಡೆಯುವ ಸಾಮಾಜಿಕ ಅಗತ್ಯತೆಯಿಂದಾಗಿ ಆರೋಪಿಗಳ ಮೇಲೆ ಸಾಕ್ಷಿಯ ಹೊರೆ ಹಾಕುವುದು ಸಮರ್ಥನೀಯವಾಗಿದೆ ಎಂದು ವಾದಿಸಿರು.