HEALTH TIPS

ಉಪರಾಷ್ಟ್ರಪತಿ ಚುನಾವಣೆ:NDA ಅಭ್ಯರ್ಥಿ ಜಗದೀಪ್ ಧನಕರ್ ಬಗ್ಗೆ ನಿಮಗೆಷ್ಟು ಗೊತ್ತು?

                ಕೋಲ್ಕತ್ತ : ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ಜಗದೀಪ್ ಧನಕರ್ ಅವರು ಈಗ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾರೆ. 2019ರಲ್ಲಿ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದೊಂದಿಗಿನ ತಿಕ್ಕಾಟದಿಂದಲೇ ಆಗಾಗ ಸುದ್ದಿಯಾಗುತ್ತಿದ್ದರು.

              ಧನಕರ್ ಅವರು ಹುಟ್ಟಿದ್ದು 1951ರಲ್ಲಿ. ಜೈಪುರದ ಮಹಾರಾಜ ಕಾಲೇಜಿನಿಂದ ಭೌತ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಜೈಪುರ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಅವರ ಪತ್ನಿಯ ಹೆಸರು ಸುದೇಶ್‌ ಧನಕರ್‌ ಮತ್ತು ಅವರಿಗೆ ಒಬ್ಬಳು ಮಗಳಿದ್ದಾರೆ.

                ವೃತ್ತಿಯಲ್ಲಿ ವಕೀಲರಾಗಿದ್ದ ಧನಕರ್ ಅವರು 1989ರಲ್ಲಿ ರಾಜಕೀಯಕ್ಕೆ ಬಂದರು. ರಾಜಸ್ಥಾನದ ಝುಂಝುನು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1990ರಲ್ಲಿ ಕೇಂದ್ರ ಸಚಿವರೂ ಆದರು. ರಾಜಸ್ಥಾನ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.

            1993ರಿಂದ 1998ರವರೆಗೆ ರಾಜಸ್ಥಾನ ವಿಧಾನಸಭೆಯ ಸದಸ್ಯರೂ ಆಗಿದ್ದರು. ಜನತಾ ದಳದಿಂದ ರಾಜಕೀಯ ಜೀವನ ಆರಂಭಿಸಿದ್ದ ಅವರು, ನಂತರ ಕಾಂಗ್ರೆಸ್ ಸೇರಿದ್ದರು. 2003ರಲ್ಲಿ ಅವರು ಬಿಜೆಪಿ ಸೇರಿದರು.

                 'ಧನಕರ್ ಅವರು ಬಿಜೆಪಿಯ ಏಜೆಂಟ್' ಎಂದು ಟಿಎಂಸಿ ಹಲವು ಬಾರಿ ಆರೋಪಿಸಿದೆ. ಆದರೆ, ಬಿಜೆಪಿ ಅವರನ್ನು ಸದಾ ಸಮರ್ಥಿಸಿಕೊಂಡಿದೆ. 'ಅವರು ಸಂವಿಧಾನದ ನಿಯಮಗಳನ್ನು ಎತ್ತಿಹಿಡಿದವರು' ಎಂದಿದೆ. ಮಮತಾ ಬ್ಯಾನರ್ಜಿ ಮತ್ತು ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡಿದಾಗಲೆಲ್ಲ ತಾವು ಸಂವಿಧಾನಕ್ಕೆ ಅನುಗುಣವಾಗಿಯೇ ನಡೆದುಕೊಂಡಿರುವುದಾಗಿ ಧನಕರ್ ಹೇಳಿದ್ದಾರೆ.ಧನಕರ್ ಮತ್ತು ಮಮತಾ ನಡುವಣ ಸಂಘರ್ಷವು ಹಲವು ಬಾರಿ ಮುಜಗರದ ಸನ್ನಿವೇಶಕ್ಕೂ ಕಾರಣವಾಗಿತ್ತು. ರಾಜ್ಯದಲ್ಲಿನ ಚುನಾವಣೋತ್ತರ ಹಿಂಸಾಚಾರ, ಸದನದಲ್ಲಿ ಅಂಗೀಕಾರವಾದ ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲರ ವಿಳಂಬ, ಆಡಳಿತ ಮತ್ತು ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮುಂತಾದ ವಿಚಾರಗಳಲ್ಲಿ ಧನಕರ್ ಮತ್ತು ಮಮತಾ ಅವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.

              ಜಾಟ್‌ ಸಮುದಾಯದ ಧನಕರ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿ ಮಾಡಿರುವುದು ಬಿಜೆಪಿಗೆ ರಾಜಕೀಯವಾಗಿ ಲಾಭ ತರಬಹುದು ಎಂಬ ಲೆಕ್ಕಾಚಾರ ಇದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಜಾಟ್‌ ಸಮುದಾಯದ ಮತದಾರರು ಬಿಜೆಪಿಗೆ ಗಣನೀಯವಾದ ಬೆಂಬಲ ನೀಡಿದ್ದಾರೆ. ಆದರೆ, ಕೃಷಿಗೆ ಸಂಬಂಧಿಸಿ ಕೇಂದ್ರವು ಜಾರಿಗೆ ತಂದಿದ್ದ ಮೂರು ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಭಾರಿ ಪ್ರತಿಭಟನೆಯ ಮುಂಚೂಣಿಯಲ್ಲಿ ಜಾಟ್‌ ಸಮುದಾಯವೇ ಇತ್ತು. ಹಾಗಾಗಿ, ಜಾಟ್‌ ಸಮುದಾಯದ ಜತೆಗೆ ಬಿಜೆಪಿಯ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಈ ಸಮುದಾಯವನ್ನು ಒಲಿಸಿಕೊಳ್ಳುವ ಉದ್ದೇಶವೂ ಈ ಆಯ್ಕೆಯ ಹಿಂದೆ ಇರಬಹುದು ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಧನಕರ್ ಅವರನ್ನು 'ರೈತನ ಮಗ' ಎಂದು ಬಣ್ಣಿಸುವುದಕ್ಕೂ ಇದುವೇ ಕಾರಣ. ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಈ ಸಮುದಾಯದ ಜನರ ಸಂಖ್ಯೆ ಹೆಚ್ಚು.

           ಉಪರಾಷ್ಟ್ರಪತಿ ಸ್ಥಾನದ ಚುನಾವಣೆಯು ಆಗಸ್ಟ್‌ 6ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries