ಚೆನ್ನೈ: ಎರಡು ಪಕ್ಷಗಳ ಸಿದ್ಧಾಂತಗಳ ನಡುವೆ ಸಂಪೂರ್ಣ ಭಿನ್ನಾಭಿಪ್ರಾಯ ಗಳಿರುವುದರಿಂದ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಮಂಗಳವಾರ ಹೇಳಿದ್ದಾರೆ.
ಜುಲೈ 28 ರಂದು ಚೆನ್ನೈನಲ್ಲಿ ನಡೆದ 44 ನೇ ಚೆಸ್ ಒಲಿಂಪಿಯಾಡ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನಡುವಿನ ಹೊಸ ಬಾಂಧವ್ಯದ ಕುರಿತ ವರದಿಗಳ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
"ಡಿಎಂಕೆ ಹಿರಿಯ ನಾಯಕರು ಪ್ರತ್ಯೇಕ ತಮಿಳುನಾಡು ಬಗ್ಗೆ ಮಾತನಾಡುತ್ತಾರೆ. ಅವರು ವೇದಿಕೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಪ್ರತ್ಯೇಕ ತಮಿಳುನಾಡು ಕುರಿತು ತಮ್ಮ ಅಭಿಪ್ರಾಯಗಳನ್ನು ಬಿತ್ತರಿಸಿದರು. ಇದು ಬಿಜೆಪಿಯ ಡಿಎನ್ಎ ಮತ್ತು ಪಕ್ಷದ ಕಾರ್ಯಕರ್ತರ ನಂಬಿಕೆಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಬಿಜೆಪಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಮೈತ್ರಿ ಬಗ್ಗೆ ರಾಷ್ಟ್ರೀಯ ನಾಯಕತ್ವ ಕೂಡ ಅದೇ ಅಭಿಪ್ರಾಯವನ್ನು ಹೊಂದಿದೆ'' ಎಂದು ಅಣ್ಣಾಮಲೈ ಹೇಳಿದ್ದಾರೆ.
ಪ್ರಧಾನಿ ದಿಲ್ಲಿಗೆ ತೆರಳಿದ ಒಂದು ದಿನದ ನಂತರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಸ್ಟಾಲಿನ್, ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯಗಳಲ್ಲಿ ಸಮಾನಾಂತರ ಸರಕಾರಗಳನ್ನು ನಡೆಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಸರಕಾರದ ನೀತಿಗಳು ಸರಕಾರದ ವಿರೋಧಿ ನೀತಿಗಳಾಗಿವೆ ಎಂದರು.
ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಬೇರೆ ಯಾವುದೇ ಪಕ್ಷದ ಮೇಲೆ ಅವಲಂಬಿತವಾಗಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.
ಇತ್ತೀಚಿನ ಸಮೀಕ್ಷೆಯನ್ನು ಉಲ್ಲೇಖಿಸಿದ ಅವರು,"ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ 370 ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ. ನಾವು ನಮ್ಮದೇ ಆದ ಬಲದಿಂದ ತಮಿಳುನಾಡಿನಲ್ಲಿ ಬೆಳೆಯುತ್ತಿದ್ದೇವೆ" ಎಂದು ಅವರು ಹೇಳಿದರು.