ಮಂಜೇಶ್ವರ: 'ವಿದ್ಯೆಯೂ ಕಲೆಯೂ ಪ್ರತ್ಯೇಕವಾಗಿರಬೇಕಾದ ವಿಷಯಗಳಲ್ಲ. ಅವುಗಳು ಜೊತೆ ಜೊತೆಯಾಗಿ ಸಾಗಬೇಕು. ಇಂದು ಅವಕಾಶಗಳ ಆಕಾಶವೇ ನಮ್ಮ ಮುಂದಿದೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು' ಎಂದು ರಂಗಭೂಮಿ ಕಲಾವಿದ, ಚಲನಚಿತ್ರ ನಟ ಪ್ರಕಾಶ್ ತೂಮಿನಾಡು ನುಡಿದರು.
ಅವರು ಮಂಜೇಶ್ವರ ಉಪಜಿಲ್ಲಾಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ 2022-23ನೇ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳನ್ನು ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ಪ್ರಕಾಶ್ ತೂಮಿನಾಡು ತಾನು ಮೊದಲು ವೇದಿಕೆ ಹತ್ತಿದ್ದು ಇದೇ ಶಾಲೆಯಲ್ಲಿ ಎಂದು ಹೆಮ್ಮೆಯಿಂದ ನೆನಪಿಸಿಕೊಂಡರು. ದೀಪ ಬೆಳಗಿ ಡೋಲು ಬಡಿದು ವಿಶಿಷ್ಟ ರೀತಿಯಲ್ಲಿ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಯೋಗಿಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಕಾಶ್ ತೂಮಿನಾಡು ಇವರನ್ನು ಶಾಲೆಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ .ವಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ, ಸಮಗ್ರ ಶಿಕ್ಷಾ ಕೇರಳ ಮಂಜೇಶ್ವರದ ಬಿಪಿಸಿ ವಿಜಯಕುಮಾರ್ ಪಾವಳ, ಕುಂಜತ್ತೂರು ಶಾಲೆಯ ವಿ.ಎಚ್.ಎಸ್.ಸಿ. ವಿಭಾಗದ ಪ್ರಾಚಾರ್ಯ ಶಿಶುಪಾಲನ್, ಹಿರಿಯ ಶಿಕ್ಷಕಿ ಸುಚೇತ, ನೌಕರ ಸಂಘದ ಕಾರ್ಯದರ್ಶಿ ಅಮಿತಾ ಶುಭಾಶಂಸನೆಗೈದರು.ವಿದ್ಯಾರಂಗ ಕಾಸರಗೋಡು ಜಿಲ್ಲಾ ಉಪಸಂಯೋಜಕ, ಶಿಕ್ಷಕ ಅಶ್ರಫ್.ಸಿ ವಿದ್ಯಾರಂಗದ ನೀತಿ-ನಡಾವಳಿಗಳ ಕುರಿತು ಮಾಹಿತಿ ನೀಡಿದರು. ಶಿಕ್ಷಕ ದಿವಾಕರ ಬಲ್ಲಾಳ್ ಅವರ ಯಕ್ಷಗಾನ ಶೈಲಿಯ ಪ್ರಾರ್ಥನೆ ಹಾಗೂ ವಿದ್ಯಾರ್ಥಿಗಳ ಯಕ್ಷಗಾನ ಶೈಲಿಯ ನೃತ್ಯ ಪ್ರದರ್ಶನ ದೊಂದಿಗೆ ವಿನೂತನವಾಗಿ ಅತಿಥಿಗಳನ್ನು ಸ್ವಾಗತಿಸಲಾಯಿತು. ಶಾಲಾವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರುಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರಂಗದ ಮಂಜೇಶ್ವರ ಉಪಜಿಲ್ಲಾ ಸಂಯೋಜಕ ಸಂದೀಪ್ ಬಲ್ಲಾಳ್ ವಂದಿಸಿದರು. ಶಿಕ್ಷಕಿ ಕವಿತಾ ಕೂಡ್ಲು ಕಾರ್ಯ ಕ್ರಮ ನಿರೂಪಿಸಿದರು. ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರಂಗದ ಸಂಯೋಜಕ ಶಿಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.
ವಿದ್ಯೆಯೂ ಕಲೆಯೂ ಜೊತೆ ಜೊತೆಯಾಗಿ ಸಾಗಲಿ': ಚಲನಚಿತ್ರ ನಟ ಪ್ರಕಾಶ್ ತೂಮಿನಾಡು
0
August 06, 2022
Tags