ಮಂಜೇಶ್ವರ: ಅಬಕಾರಿ ಇಲಾಖಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳ ರಸ್ತೆಸಾರಿಗೆ ನಿಗಮದ ಬಸ್ಸಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 30ಲಕ್ಷ ರೂ. ಕಾಳಧನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸಹರಾ ನಿವಾಸಿ ಹಾಗೂ ಮಂಜೇರಿಯ ಚಿನ್ನದಂಗಡಿಯಲ್ಲಿ ಕಾರ್ಮಿಕನಾಗಿರುವ ಯಶೋದೀಪ್ ಶರದ್ ಬಾಬಡೆ(22)ಎಂಬಾತನನ್ನು ಬಂಧೀಸಲಾಗಿದೆ.
ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದಾಗ ಅಬಕಾರಿ ಇನ್ಸ್ಪೆಕ್ಟರ್ ಸಜಿತ್ ಕೆ.ಎಸ್ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಲಾಗಿದೆ. 500ರೂ. ಮೌಲ್ಯದ ನೋಟುಗಳನ್ನೊಳಗೊಂಡ 21ಲಕ್ಷ ರೂ. ಹಾಗೂ 2ಸಾವಿರ ರೂ. ಮೌಲ್ಯದ ನೋಟುಗಳನ್ನೊಳಗೊಂಡ 9ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಹಣವನ್ನು ಮಂಜೇಶ್ವರ ಠಾಣೆ ಪೊಲೀಸರಿಗೊಪ್ಪಿಸಲಾಗಿದ್ದು, ಆದಾಯ ತೆರಿಗೆ ಹಾಗೂ ಎನ್ಫೋರ್ಸ್ಮೆಂಟ್ ಅಧಿಕಾರಿಗಳು ತನಿಖೆ ಮುಂದುವರಿಸಲಿದ್ದಾರೆ ಎಂದು ಅಬಕಾರಿ ದಳ ಅಧಿಕಾರಿಗಳು ತಿಳಿಸಿದ್ದಾರೆ.