HEALTH TIPS

ಜಿಲ್ಲೆಯಲ್ಲಿ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಯೋಜನೆಗೆ ಚಾಲನೆ: ಶ್ವಾನ ಸೆರೆಹಿಡಿಯಲು ವಿಶೇಷ ತಂಡ



             ಕಾಸರಗೋಡು: ಬೀದಿ ನಾಯಿಗಳಿಗೆ ಲಸಿಕೆ ಹಾಕಲು ಜಿಲ್ಲಾ ಮಟ್ಟದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಸ್ಪೆಶಲ್ ಟ್ರೈನಿಂಗ್ ಫಾರ್ ಅನಿಮಲ್ ರೆಸ್ಕ್ಯೂ ಟೀಮ್ (ಎಸ್‍ಟಿಎಆರ್‍ಟಿ) ಯೋಜನೆಯಡಿಯಲ್ಲಿ ಸ್ವಯಂಸೇವಕರನ್ನು ಮಿಷನ್ ವಾರಿಯರ್ಸ್ ಆಗಿ ಸಜ್ಜುಗೊಳಿಸಲು ಜಿಲ್ಲಾ ಪಂಚಾಯಿತಿ ತೀರ್ಮಾನಿಸಿದೆ.  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ಬೀದಿ ನಾಯಿಗಳ ಲಸಿಕೆ ಹಾಕುವ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
            ಬೀದಿ ನಾಯಿಗಳಿಗೆ ಲಸಿಕೆ ಹಾಕುವ ತಂಡಕ್ಕೆ ಸೇರ್ಪಡೆಗೊಳ್ಳಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯಾ ಪಂಚಾಯಿತಿಯ ಸರ್ಕಾರಿ ಮೃಗಾಸ್ಪತ್ರೆಯಲ್ಲಿ ಅರ್ಜಿ ಸಲ್ಲಿಸಬೇಕು. ಸ್ವಯಂಸೇವಕರಿಗೆ ಆನ್‍ಲೈನ್ ನೋಂದಣಿಯನ್ನು ಸಹ ಪರಿಚಯಿಸಲಾಗುವುದು. ನಂತರ ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸೆಪ್ಟೆಂಬರ್ 30ರ ವರೆಗೆ ಅರ್ಜಿ ಸ್ವೀಕರಿಸಿ, ಅಕ್ಟೋಬರ್ 10 ರೊಳಗೆ ತರಬೇತಿ ಆರಂಭಿಸಲಾಗುವುದು. ಕಣ್ಣೂರಿನ ಜಾನುವಾರು ನಿರ್ವಹಣಾ ತರಬೇತಿ ಕೇಂದ್ರದಲ್ಲಿ ತರಬೇತಿ ನಡೆಯಲಿದೆ. ಬೀದಿ ನಾಯಿಗಳಿಗೆ ಲಸಿಕೆ ನೀಡಲು ತರಬೇತಿ ನೀಡಿದ ನಂತರ, ಅವರನ್ನು ಪಂಚಾಯಿತಿಗಳಿಗೆ ನಿಯೋಜಿಸಲಾಗುವುದು. ವಾಹನ, ಜೀವ ರಕ್ಷಕ ಉಪಕರಣಗಳು, ಔಷಧ, ಸಮವಸ್ತ್ರ, ಗುರುತಿನ ಚೀಟಿ ಮತ್ತು ಇತರ ಪರಿಕರಗಳನ್ನು ನೀಡಲಾಗುವುದು.  ನಾಯಿಯನ್ನು ಸೆರೆಹಿಡಿದು ಲಸಿಕಾ ಕೇಂದ್ರಕ್ಕೆ ತರುವ ಸ್ವಯಂಸೇವಕರು 500 ರೂ. ಲಭಿಸಲಿದ್ದು, ಲಸಿಕಾ ಕೇಂದ್ರಗಳಲ್ಲಿ ವೈದ್ಯರ ಸೇವೆಯನ್ನೂ ಖಾತ್ರಿಪಡಿಸಲಾಗುವುದು.
                ಬೀದಿ ನಾಯಿಗಳಿಗೆ ಆಹಾರ ಒದಗಿಸಲು ಸಮುದಾಯ ಅಡುಗೆ ಮಾದರಿಯನ್ನು ಪಂಚಾಯಿತಿ ಮಟ್ಟದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು. ಪಂಚಾಯಿತಿ ವ್ಯಾಪ್ತಿಯ ಹೋಟೆಲ್, ಮನೆಗಳಲ್ಲಿ ಉಳಿದ ಆಹಾರ ಸಂಗ್ರಹಿಸಿ ಬೀದಿ ನಾಯಿಗಳಿಗೆ ನೀಡಲಾಗುವುದು. ಈ ಬಗ್ಗೆ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಚರ್ಚಿಸಲು ನಿರ್ಧರಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಜಿಲ್ಲಾ ಮೃಗಸಂರಕ್ಷಣಾಧಿಕಾರಿ ಡಾ.ಬಿ.ಸುರೇಶ್, ಜಿಲ್ಲಾ ಪಂಚಾಯಿತಿ ಹಣಕಾಸು ಅಧಿಕಾರಿ ಎ.ಅಶ್ರಫ್, ಜಿಲ್ಲಾ ಪಶು ಸಂರಕ್ಷಣಾ ಕಚೇರಿಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಎ.ಮುರಳೀಧರನ್, ಪಶು ವೈದ್ಯಾಧಿಕಾರಿ ಡಾ.ಬಿ.ಕೆ.ಪ್ರಮೋದ್, ಡಿಡಿಪಿ ಕಿರಿಯ ಅಧೀಕ್ಷಕ ಪಿ.ವಿ.ಭಾಸ್ಕರನ್.  ಮುಂತಾದವರು ಭಾಗವಹಿಸಿದ್ದರು.
                                 ಸಾಕುನಾಯಿಗಳಿಗೆ ಲಸಿಕೆ:
            ಜಿಲ್ಲೆಯಲ್ಲಿ ಸಾಕು ನಾಯಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಂಡಿದ್ದು, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲೆಯಲ್ಲಿ ಅಕ್ಟೋಬರ್ 26ರವರೆಗೆ ಸಾಕು ನಾಯಿಗಳಿಗೆ ಲಸಿಕೆ ಶಿಬಿರ ಆಯೋಜಿಸಲಾಗಿದೆ. ಶಿಬಿರಗಳು ಪ್ರಾದೇಶಿಕ ಮಟ್ಟದಲ್ಲಿ ನಡೆಯಲಿದ್ದು,  ಈ ಹಂತದಲ್ಲಿ ಸಾಕು ನಾಯಿಗಳಿಗೆ ಪರವಾನಗಿ ನೀಡಲಾಗುವುದು.. ಪಾರಕಟ್ಟಾದಲ್ಲಿ ನಡೆದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಜಿಲ್ಲಾ ಪಶು ಸಂರಕ್ಷಣಾಧಿಕಾರಿ ಡಾ.ಬಿ.ಸುರೇಶ್, ಹಿರಿಯ ಪಶು ವೈದ್ಯಾಧಿಕಾರಿ ಡಾ.ಎ.ಮುರಳೀಧರನ್ ಮತ್ತಿತರರು ಮಾತನಾಡಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries