ಮುಳ್ಳೇರಿಯ: ದೇವಸ್ಥಾನಕ್ಕೆ ಭಕ್ತಿಯಿಂದ ಸಮರ್ಪಿಸುವ ಸಣ್ಣ ಕಾಣಿಕೆಯೂ ದೊಡ್ಡ ಫಲವನ್ನು ನೀಡುತ್ತದೆ. ಹನಿಹನಿ ಸೇರಿ ದೊಡ್ಡ ಮೊತ್ತವಾಗಿ ನೂತನ ಬಿಂಬ ನಿರ್ಮಾಣ, ಜೀರ್ಣೋದ್ಧಾರ ಕಾರ್ಯ ಮೊದಲಾದ ಕೆಲಸಗಳು ನಿರ್ವಿಘ್ನವಾಗಿ ನಡೆಯುವುದು. ಎಲ್ಲಾ ಭಕ್ತರ ಕಾಣಿಕೆಯಿಂದ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಬೇಕು ಎನ್ನುವ ಉದ್ದೇಶದಿಂದ ಮಾಡುವ ನಿಧಿ ಸಂಗ್ರಹ ಹೆಚ್ಚು ಮಹತ್ವವನ್ನು ಪಡೆಯುತ್ತದೆ. ಆದುದರಿಂದ ಎಲ್ಲರೂ ನಿಧಿ ಸಂಗ್ರಹ ಮಾಡುವಲ್ಲಿ ಭಕ್ತಿಯಿಂದ ತೊಡಗಿಸಿಕೊಳ್ಳಬೇಕು ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ನುಡಿದರು.
ಅವರು ವಲವಡಲ ಶ್ರೀ ಮಹಾದೇವ ಶ್ರೀ ಮಹಾವಿಷ್ಣು ಜೋಡು ಕ್ಷೇತ್ರದ ನೂತನ ವಿಗ್ರಹ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವ ನಿಧಿ ಸಮರ್ಪಣೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಆನೆಮಜಲು ವಿಷ್ಣು ಭಟ್ ಮಲ್ಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಮಾತನಾಡಿ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು ದೇವಸ್ಥಾನ ಹಾಗೂ ಆ ಮೂಲಕ ನಾಡಿನ ಅಭಿವೃದ್ಧಿಗೆ ಜನರು ಶ್ರಮಿಸಬೇಕು. ಆರಾಧನಾಲಯಗಳು ನಾಡಿನ ಬಹುದೊಡ್ಡ ಅನುಗ್ರಹ. ಭಜನೆ, ವ್ರತ, ಕರಸೇವೆ ಮುಂತಾದವುಗಳ ಮೂಲಕ ಭಗವಂತನ ಸೇವೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಜೋಡು ದೇವಸ್ಥಾನದ ತಂತ್ರಿವರ್ಯ ದೇಲಂಪಾಡಿ ಬ್ರಹ್ಮಶ್ರೀ ಗಣೇಶ ತಂತ್ರಿಯವರು ಕ್ಷೇತ್ರದ ವಿಶೇಷತೆ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದರು. ವಿಶಿಷ್ಟವಾದ ಆಚರಣೆಗಳು. ಸೇವೆಗಳು ಇಲ್ಲಿ ನಡೆಯುತ್ತಿದ್ದು ಮಹಾದೇವ ಹಾಗೂ ಮಹಾವಿಷ್ಣು ದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಬೇರೆ ಬೇರೆ ಮುಹೂರ್ತದಲ್ಲಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧರ್ಮದ ಮೇಲಿನ ಗೌರವ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಪ್ರತಿಯೊಬ್ಬನ ಕರ್ತವ್ಯ ಎಂದರು. ರಾಧಾಕೃಷ್ಣ ಭಟ್ ಪಣಿಯೆ, ಜೋಡು ದೇವಸ್ಥಾನದ ಮೊಕ್ತೇಸರರಾದ ಜಗದೀಶ್ ರಾವ್ ಪೈಕಾನ, ಮುಂಡೋಳು ದೇವಸ್ಥಾನದ ಮೊಕ್ತೇಸರರಾದ ರಘುರಾಮ ಬಲ್ಲಾಳ್ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಸ್ವಾಗತಿಸಿ ರಾಮಚಂದ್ರ ಗೌರಿಯಡ್ಕ ವಂದಿಸಿದರು. ಸಮವಸ್ತ್ರ ಧರಿಸಿದ ಭಕ್ತರು ಮುತ್ತುಕೊಡೆ, ಕಲಶ, ಹೂಗಳ ಮೂಲಕ ಎಡನೀರು ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಸತ್ಯನಾರಾಯಣ ಕಯಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾಯಿತು.
ವಲವಡಲ ಶ್ರೀ ಮಹಾದೇವ ಶ್ರೀ ಮಹಾವಿಷ್ಣು ಜೋಡು ಕ್ಷೇತ್ರದ ನೂತನ ವಿಗ್ರಹ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವ ನಿಧಿ ಸಮರ್ಪಣೆಗೆ ಚಾಲನೆ
0
September 20, 2022
Tags