ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಅನಂತಪದ್ಮನಾಭ ಸನ್ನಿಧಿಗೆ ಶುಕ್ರವಾರ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಭೇಟಿ ನೀಡಿದರು.
ಬೆಳಿಗ್ಗೆ 10.30ಕ್ಕೆ ಶ್ರೀಸನ್ನಿಧಿಗೆ ಆಗಮಿಸಿದ ಶ್ರೀಗಳನ್ನು ಶ್ರೀಕ್ಷೇತ್ರದ ವತಿಯಿಂದ ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು. ಬಳಿಕ ವಿವಿಧ ವೈಧಿಕ ವಿಧಿಗಳಲ್ಲಿ ಶ್ರೀಗಳು ಪಾಲ್ಗೊಂಡರು. ಮಧ್ಯಾಹ್ನ ಮಹಾಪೂಜೆ, ಪಾದಪೂಜೆ, ಭಿಕ್ಷಾ ಸೇವೆಗಳು ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಪುನರ್ ನವೀಕರಣ-ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾರಂತ ಅಧ್ಯಕ್ಷತೆ ವಹಿಸಿದ್ದರು. ತಂತ್ರಿವರ್ಯ ಬ್ರಹ್ಮಶ್ರೀದೇಲಂಪಾಡಿ ಗಣೇಶ ತಂತ್ರಿ ಅವರು ಉದ್ಘಾಟಿಸಿದರು.
ಈ ಸಂದರ್ಭ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದ ಶ್ರೀಮದ್ ಎಡನೀರು ಶ್ರೀಗಳು, ಪಾವಿತ್ರ್ಯತೆ, ಈತಿಹಾಸಿಕ ಹಿನ್ನೆಲೆಯಿಂದೊಡಗೂಡಿದ ಮನೋಹರ ಕ್ಷೇತ್ರವಾದ ಅನಂತಪುರ ಸನ್ನಿಧಿಯ ಜೀರ್ಣೋದ್ದಾರ ಕ್ಲಪ್ತ ಸಮಯಕ್ಕೆ ನಡೆಯಲಿದೆ. ದೇವಾಲಯಗಳನ್ನು ಕಾಲಾಕಾಲಕ್ಕೆ ನವೀಕರಿಸುವುದರಿಂದ ಸಾನ್ನಿಧ್ಯ ಶಕ್ತಿ ವೃದ್ದಿಸುವುದರೊಂದಿಗೆ ನಮ್ಮ ಅಂತಃಕರಣದೊಳಗಿನ ಧೀಶಕ್ತಿ ಬಲಗೊಳ್ಳುತ್ತದೆ. ಕಷ್ಟ ಕಾರ್ಪಣ್ಯಗಳು ಕರಗುತ್ತದೆ ಎಂದರು.
ಉದ್ಯಮಿ ರಮೇಶ್ ವಿ ಅಯ್ಯರ್ ಬೆಂಗಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕ್ಷೇತ್ರ ಆಡಳಿತ ಸಮಿತಿ ಟ್ರಸ್ಟಿ ನ್ಯಾಯವಾದಿ ಉದಯಕುಮಾರ್ ಗಟ್ಟಿ, ಗ್ರಾ.ಪಂ.ಸದಸ್ಯ ಜನಾರ್ಧನ ಕಣ್ಣೂರು ಉಪಸ್ಥಿತರಿದ್ದು ಮಾತನಾಡಿದರು. ಜೀರ್ಣೋದ್ದಾರ-ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಎಂ.ವಿ.ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಮಚಂದ್ರ ಭಟ್ ವಂದಿಸಿದರು. ಸತ್ಯಶಂಕರ ಅನಂತಪುರ ನಿರೂಪಿಸಿದರು.