ನವದೆಹಲಿ: 1984ರ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಪರಿಹಾರ ನೀಡಲು ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (ಯುಸಿಸಿ) ಸಂಸ್ಥೆಯ ಉತ್ತರಾಧಿಕಾರಿ ಸಂಸ್ಥೆಗಳಿಂದ ₹7,844 ಕೋಟಿ ಹೆಚ್ಚುವರಿ ಮೊತ್ತವನ್ನು ಆಗ್ರಹಿಸುವ ಪರಿಹಾರಾತ್ಮಕ ಅರ್ಜಿಯನ್ನು ಕೇಂದ್ರ ಸರ್ಕಾರ ಮುಂದುವರೆಸಲಿದೆ ಎಂದು ಸುಪ್ರೀಂ ಕೋರ್ಟ್ಗೆ ಮಂಗಳವಾರ ತಿಳಿಸಲಾಯಿತು.
₹38.86 ಸಾವಿರ ಕೋಟಿ ಪರಿಹಾರವನ್ನು ಯುಸಿಸಿ ನೀಡಬೇಕು ಎಂದು ಇದಕ್ಕೂ ಮೊದಲು ಒಪ್ಪಂದವಾಗಿತ್ತು. ಅದರ ಮೇಲೆ ₹7,844 ಕೋಟಿ ಹೆಚ್ಚುವರಿಯಾಗಿ ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ನ್ಯಾಯಮೂರ್ತಿ ಕೆ.ಎಸ್.ಕೌಲ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಸರ್ಕಾರದ ನಿರ್ಧಾರದ ಕುರಿತು ಮಾಹಿತಿ ನೀಡಿದರು. ಇದನ್ನು ದಾಖಲಿಸಿಕೊಂಡ ಪೀಠವು ಮುಂದಿನ ಎಂಟು ವಾರಗಳ ಒಳಗಾಗಿ ಅರ್ಜಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಲ್ಲಿಸುವಂತೆ ಹೇಳಿದೆ.
ಅರ್ಜಿ ಕುರಿತ ಮುಂದಿನ ವಿಚಾರಣೆಯನ್ನು 2023ರ ಜನವರಿ 10ಕ್ಕೆ ಕೋರ್ಟ್ ನಿಗದಿಪಡಿಸಿದೆ.
ದುರಂತದ ಕುರಿತು ತೀರ್ಪು ನೀಡಿ 19 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಪರಿಹಾರಾತ್ಮಕ ಅರ್ಜಿಯ ವಿಚಾರಣಾ ಯೋಗ್ಯತೆಯನ್ನು ಪ್ರತಿವಾದಿ ಪರ ವಕೀಲರು ಪ್ರಶ್ನಿಸಿದ್ದಾರೆ.ಹೆಚ್ಚುವರಿ ಪರಿಹಾರ ಧನವನ್ನು ಆಗ್ರಹಿಸಿ ಕೇಂದ್ರ ಸರ್ಕಾರವು 2010ರ ಡಿಸೆಂಬರ್ನಲ್ಲಿ ಸುಪ್ರೀಂ ಕೋರ್ಟ್ಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಿತ್ತು.