ಮುಂಬೈ: ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳು, ಅಧಿಕ ವಾಣಿಜ್ಯ ಕೊರತೆ ಮತ್ತು ಕುಸಿಯುತ್ತಿರುವ ವಿದೇಶಿ ವಿನಿಮಯ ಸಂಗ್ರಹ ಮುಂತಾದ ಕಾರಣಗಳಿಂದಾಗಿ ಮುಂದಿನ ವರ್ಷದ ಮಾರ್ಚ್ ವೇಳೆಗೆ ಡಾಲರ್ ಎದುರು ರೂಪಾಯಿ ಮೌಲ್ಯ 84ರಿಂದ 85 ರೂಪಾಯಿಗೆ ಕುಸಿಯುವ ಸಂಭವವಿದೆ ಎಂದು ಎಲಾರಾ ಗ್ಲೋಬಲ್ ರೀಸರ್ಚ್ ಭವಿಷ್ಯ ನುಡಿದಿದೆ.
ಈ ಮಧ್ಯೆ, ಸೋಮವಾರ ರೂಪಾಯಿ ಮೌಲ್ಯ 10 ಪೈಸೆ ಇಳಿಕೆಯಾಗಿ ಸಾರ್ವಕಾಲಿಕ ದಾಖಲೆಯ 82.40 ರೂ.ಗೆ ಕುಸಿದಿದೆ. ಶುಕ್ರವಾರ ರೂಪಾಯಿ ಮೌಲ್ಯದಲ್ಲಿ 13 ಪೈಸೆ ಕುಸಿತವಾಗಿತ್ತು. ಅಮೆರಿಕದ ಕೇಂದ್ರೀಯ ಬ್ಯಾಂಕ್ನ ಕ್ರಮಗಳು ಮತ್ತು ಬಡ್ಡಿ ದರಗಳ ವ್ಯತ್ಯಾಸಗಳಿಂದ ಜಾಗತಿಕ ಪರಿಸ್ಥಿತಿ ಮೇಲಿನ ಬಿಗಿ ಹಿಡಿತದಿಂದಾಗಿ ಇದುವರೆಗೆ ರೂಪಾಯಿ ಹೆಚ್ಚು ನಷ್ಟ ಅನುಭವಿಸಿದೆ. ಮುಂದೆಯೂ ಅದರ ಕರಿ ನೆರಳು ಬೀಳುವ ಸಾಧ್ಯತೆಯಿದೆ ಎಂದು ಎಲಾರಾದ ಅರ್ಥಶಾಸ್ತ್ರಜ್ಞೆ ಗರಿಮಾ ಕಪೂರ್ ಅಭಿಪ್ರಾಯ ಪಟ್ಟಿದ್ದಾರೆ.
82,400 ಕೋಟಿ ರೂ. ಸಂಗ್ರಹಕ್ಕೆ ಅದಾನಿ ಯೋಜನೆ: ಕನಿಷ್ಠ 10 ಬಿಲಿಯನ್ ಡಾಲರ್ (82,400 ಕೋಟಿ ರೂ.) ಬಂಡವಾಳ ಸಂಗ್ರಹಕ್ಕೆ ಗೌತಮ್ ಅದಾನಿ ಮತ್ತು ಕುಟುಂಬವು ಹೂಡಿಕೆದಾರರೊಂದಿಗೆ ಚರ್ಚೆ ಆರಂಭಿಸಿದೆ. ಸಿಂಗಾಪುರದ ಹೂಡಿಕೆ ಕಂಪನಿಗಳಾದಚ ಟೆಮಾಸೆಕ್ ಮತ್ತು ಜಿಐಸಿ ಕೂಡ ಅದಾನಿ ಸಮಾಲೋಚನೆ ನಡೆಸುತ್ತಿರುವ ಸಂಸ್ಥೆಗಳಲ್ಲಿ ಸೇರಿವೆ.
ಚಿನ್ನ-ಬೆಳ್ಳಿ ಅಗ್ಗ: ದೆಹಲಿಯ ಚಿನಿವಾರ ಪೇಟೆಯಲ್ಲಿ ಸೋಮವಾರ ಬಂಗಾರದ ಬೆಲೆಯಲ್ಲಿ 543 ರೂಪಾಯಿ ಇಳಿಕೆಯಾಗಿ 10 ಗ್ರಾಂ ಬೆಲೆ 51,625 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯಲ್ಲಿ 2,121 ರೂಪಾಯಿ ಕಡಿಮೆಯಾಗಿ ಕೆ.ಜಿ. ದರ 59,725 ರೂಪಾಯಿ ಇಳಿದಿದೆ.
ಷೇರುಪೇಟೆ ಋಣಾತ್ಮಕ
ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲತೆಯ ಪರಿಣಾಮ ಭಾರತದ ಷೇರು ಮಾರ್ಕೆಟ್ ಮೇಲೂ ಬಿದ್ದಿದ್ದು, ಮಂದ ವಹಿವಾಟಿನ ವಾತಾವರಣ ನೆಲೆಸಿತ್ತು. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 200.18 ಪಾಯಿಂಟ್ ಇಳಿದು 57,991.11ರಲ್ಲಿ ವಹಿವಾಟು ನಿಂತಿತು. ನಿಫ್ಟಿಯಲ್ಲಿ 73.65 ಅಂಕ ಕುಸಿತವಾಗಿ 57,365.68ರಲ್ಲಿ ಕೊನೆಗೊಂಡಿತು.
ಸ್ವಿಸ್ ಬ್ಯಾಂಕ್ ಖಾತೆ ಮಾಹಿತಿ ಲಭ್ಯ
ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟಿರುವ ಭಾರತೀಯರ ನೂರಾರು ಖಾತೆಗಳ ವಿವರ ಕೇಂದ್ರ ಸರ್ಕಾರಕ್ಕೆ ಲಭ್ಯವಾಗಿದ್ದು ಇದು ಭಾರತೀಯ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳ ವಿವರದ ನಾಲ್ಕನೇ ಹಂತ ಆಗಿದೆ. ಸ್ವಿಜರ್ಲೆಂಡ್ ಜತೆಗಿನ ಒಪ್ಪಂದ ಪ್ರಕಾರ, ಸ್ವಯಂಚಾಲಿತ ವ್ಯವಸ್ಥೆ ಮೂಲಕ ಪ್ರತಿ ವರ್ಷ ಸ್ವಿಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರ ವಿವರವನ್ನು ಸಂಬಂಧಪಟ್ಟ ದೇಶಗಳೊಂದಿಗೆ ಹಂಚಿಕೊಳ್ಳುತ್ತದೆ. ಈ ವ್ಯವಸ್ಥೆಯಡಿ ಸ್ವಿಜರ್ಲೆಂಡ್ 101 ದೇಶಗಳೊಂದಿಗೆ 34 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು ವಿನಿಮಯ ಮಾಡಿಕೊಂಡಿದೆ. ಮಾಹಿತಿ ವಿನಿಮಯ ಮಾಡಿಕೊಳ್ಳುವ ದೇಶಗಳ ಪಟ್ಟಿಗೆ ಐದು ರಾಷ್ಟ್ರಗಳು ಸೇರ್ಪಡೆಯಾಗಿದೆ ಎಂದು ಸ್ವಿಜರ್ಲೆಂಡ್ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಶನ್ ಸೋಮವಾರ ತಿಳಿಸಿದೆ. ಭಾರತೀಯರು, ಕಾರ್ಪೆರೇಟ್ಗಳು ಮತ್ತು ಟ್ರಸ್ಟ್ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಾಲ್ಕನೇ ಹಂತದಲ್ಲಿ ಸ್ವಿಸ್ ಸರ್ಕಾರ ಹಂಚಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಗೋಪ್ಯತೆ ನಿಯಮ ಕಾಪಾಡುವ ಹಿನ್ನೆಲೆಯಲ್ಲಿ ನಿರ್ದಿಷ್ಟ ವಿವರಗಳನ್ನು ಬ್ಯಾಂಕ್ ಒದಗಿಸಿಲ್ಲ. ಭಾರತೀಯರು ಕಾನೂನು ಬಾಹಿರವಾಗಿ ಹಣ ಇರಿಸಿದ್ದು, ಕಂಡುಬಂದರೆ ಅವರ ವಿರುದ್ಧ ಖಂಡಿತವಾಗಿಯೂ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದಾಗ ವಿದೇಶಿ ಬ್ಯಾಂಕ್ಗಳಲ್ಲಿ ಕಪುಪ ಹಣ ಇರಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಸ್ವಿಜರ್ಲೆಂಡ್ ಜತೆ ಭಾರತ ಮಾಹಿತಿ ವಿನಿಮಯಕ್ಕೆ ಒಪ್ಪಂದ ಮಾಡಿಕೊಂಡಿದೆ.