ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಶಾಲಾ ಕಲೋತ್ಸವಕ್ಕೆ ಸಂಭ್ರಮದ ಚಾಲನೆ ದೊರೆಯಿತು. ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ತುಳುನಾಡಿನ ಹೆಮ್ಮೆಯ ಸಾಂಸ್ಕøತಿಕ ಕಲಾ ರೂಪ "ಹುಲಿವೇಷ ಕುಣಿತ"ವು ಕಲೋತ್ಸವಕ್ಕೆ ಮುನ್ನುಡಿಯನ್ನು ಬರೆಯಿತು.
ಸಮಾರಂಭದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದ ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್ ಎನ್. ಮಾತನಾಡಿ, ಕಲೋತ್ಸವವು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಕಲಾಪ್ರತಿಭೆಯನ್ನು ಹೊರ ತರುವುದಕ್ಕೆ ಉತ್ತಮ ಮಾಧ್ಯಮವಾಗಿದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳೂ ಇದನ್ನು ಅತ್ಯಂತ ಫಲಪ್ರದವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸರ್ಕಾರಿ.ಹಿ.ಪ್ರಾ.ಶಾ.ಕಾಸರಗೋಡು ಚಲನಚಿತ್ರ ಖ್ಯಾತಿಯ ಯೋಗೀಶ್ ಶೆಟ್ಟಿ ಧರ್ಮೆಮಾರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ಮೂಡಿಸಿದರು. ಜೀವನದಲ್ಲಿ ನಾವು ಸ್ವಯಂ ಸವಾಲನ್ನು ಹಾಕಿಕೊಂಡು, ಅದನ್ನು ಸ್ವೀಕರಿಸಿ ಗೆದ್ದು ನಿರೂಪಿಸಬೇಕು. ನಮ್ಮ ಹೋರಾಟ ನಮ್ಮ ನಿನ್ನೆಯೊಂದಿಗೆ ಆಗಿರಬೇಕು, ಹೊರತು ಪರರೊಂದಿಗಲ್ಲ. ಹಾಗಿದ್ದಾಗ ನಾವು ಸದಾ ಯಶಸ್ಸನ್ನು ಗಳಿಸಬಹುದು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯೋಗೀಶ್ ಶೆಟ್ಟಿ ಧರ್ಮೆಮಾರ್ ಮಾತನಾಡಿದರು. ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಾಪಕ ಶಶಿಧರ ಕೆ. ಅತಿಥಿಯ ಕಿರುಪರಿಚಯ ವಾಚಿಸಿದರು.
ಮುಖ್ಯೋಪಾಧ್ಯಾಯ ಇ .ಎಚ್. ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜೋನ್ ಡಿಸೋಜ ಅಧ್ಯಕ್ಷತೆ ವಹಿಸಿದರು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಶುಭ ಹಾರೈಸಿದರು. ನೌಕರ ಸಂಘದ ಕಾರ್ಯದರ್ಶಿ ರಾಮಕೃಷ್ಣ ಭಟ್, ಅಧ್ಯಾಪಿಕೆಯರಾದ ಉಷಾ ಕೆ. ಆರ್., ಶ್ರೀಜಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ಪ್ರಾರ್ಥನೆ ಹಾಡಿದರು. ಕಲೋತ್ಸವ ಸಂಚಾಲಕಿ ಸೌಮ್ಯ ಎಂ. ಸ್ವಾಗತಿಸಿ, ಈಶ್ವರಿ ವಂದಿಸಿದರು. ಪ್ರಶಾಂತ ಹೊಳ್ಳ ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಿದಿನಗಳ ಕಲೋತ್ಸವ ವೇದಿಕೆಯು ಸರ್ವ ಅಧ್ಯಾಪಕ-ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗಾಗಿ ತೆರೆದುಕೊಂಡಿತು.
ಧರ್ಮತ್ತಡ್ಕ ಶಾಲೆಯಲ್ಲಿ ಹುಲಿವೇಷ ಕುಣಿತದೊಂದಿಗೆ ಶಾಲಾ ಕಲೋತ್ಸವಕ್ಕೆ ಚಾಲನೆ
0
October 18, 2022
Tags