ಕಾಸರಗೋಡು: ಪತ್ತನಂತಿಟ್ಟದಲ್ಲಿ ಸಂಪತ್ತಿನ ಆಸೆಗೆ ಬಲಿಬಿದ್ದು ಮೂವರು ಸೇರಿ ಇಬ್ಭರು ಮಹಿಳೆಯರನ್ನು ಕೊಚ್ಚಿ ಕೊಲೆಗ್ಯೆದ ಘಟನೆ ನಿನ್ನೆಯಿಂದ ರಾಜ್ಯಾದ್ಯಂತ ಸುದ್ದಿಯಲ್ಲಿದೆ. ಆದರೆ ಕಾಸರಗೊಡಿನ ಬಹುಮಂದಿಗೆ ನೆನಪಾದುದೇ ಬೇರೆ. ಸರಿ ಸುಮಾರು 29 ವರ್ಷಗಳ ಹಿಂದೆ ಪೆರ್ಲ ಸಮೀಪದ ದೇವಲೋಕದಲ್ಲಿ ನಡೆದ ಇಂಥದ್ದೇ ಘಟನೆಯನ್ನು ಕಾಸರಗೋಡು ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ.
ಅಂದೂ ಹೀಗೆಯೆ. ಆದರೆ ಅಂದು ಬಲಿಯಾದ್ದು ಸ್ವತಃ ದುರಾಸೆಪಟ್ಟವರಾದರೆ ಇಂದೀಗ ಆಹುತಿಗೊಳಪಟ್ಟದ್ದು ಬೇರಿಬ್ಬರು. ಎರಡೂ ಘಟನೆಗಳ ಲಕ್ಷ್ಯ ಒಂದೆ; ಸಂಪತ್ತು ಶೇಖರಣೆ! ಅಂದು ನಿಧಿಯ ಹೆಸರಲ್ಲಿ ಮಾಂತ್ರಿಕನು ದೇವಲೋಕದಲ್ಲಿ ದಂಪತಿಗಳನ್ನು ಕೊಂದು ಹೂಳಿದನು. ಘಟನೆಯಲ್ಲಿ, 19 ವರ್ಷದ ಇಮಾಮ್ ಹುಸೇನ್ ನನ್ನು ಬಂಧಿಸಲಾಯಿತು ಮತ್ತು ಎರಡು ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ.........
ಒಂದು ವರ್ಷದ ನಂತರ, ಹೈಕೋರ್ಟ್ನ ವಿಭಾಗೀಯ ಪೀಠವು ಮಾಟಗಾರ ಹುಸೇನ್ ನನ್ನು ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತು. ದೇವಲೋಕದ ಶ್ರೀಕೃಷ್ಣ ಭಟ್(45 ) ಅವರ ಪತ್ನಿ ಶ್ರೀಮತಿ (35 )ಅಂದು ದುರಾಸೆಗೆ ಬಲಿಯಾದವರು.
ಬಹುತೇಕ ದಿನಾಂಕಗಳೂ ಸಮಾನವೆಂಬುದಿಲ್ಲಿ ಕಾಕತಾಳೀಯವೆ. ಅಕ್ಟೋಬರ್ 9, 1993 ರಂದು ರಾತ್ರಿ ದೇವಲೋಕದಲ್ಲಿ ಶ್ರೀಕೃಷ್ಣ ಭಟ್- ಶ್ರೀಮತಿ ದಂಪತಿಗಳ ಕೊಲೆ ನಡೆದಿತ್ತು.ಪ
ಪತ್ತನಂತಿಟ್ಟ ಕೊಲೆ ಸುದ್ದಿಯಾದಾಗ ಕಾಸರಗೋಡಿನ ಜನತೆಗೆ 29 ವರ್ಷಗಳ ಹಿಂದೆ ದೇವಲೋಕದ ಇಂಥದ್ದೇ ಘಟನೆ ನೆನಪಾಗುತ್ತದೆ.
ನಕಲಿ ಮಾಂತ್ರಿಕ ಇಮಾಮ್ ಹುಸೇನ್ ಶ್ರೀಕೃಷ್ಣ ಭಟ್ ಅವರ ಕುಟುಂಬದೊಂದಿಗೆ ಸ್ನೇಹ ಬೆಳೆಸಿ ಕೊಲೆಯಲ್ಲಿ ಪರ್ಯವಸಾನಗೊಂಡಿತ್ತು.
ಸಾಂದರ್ಭಿಕ ಸಾಕ್ಷ್ಯದ ಮೇಲೆ ಮುಂದುವರಿದ ಪ್ರಕರಣದಲ್ಲಿ, ಹುಸೇನ್ ದಂಪತಿಗಳಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಅವರನ್ನು ತೋಟದಲ್ಲಿ ಸಿದ್ಧಪಡಿಸಿದ ಗುಂಡಿಯಲ್ಲಿ ಕುಳಿತು ಪ್ರಾರ್ಥಿಸಲು ಹೇಳಿದರು. ದಂಪತಿಗಳು ಗುಂಡಿಗೆ ಇಳಿದು ಸಂಪತ್ತು ಗಳಿಸುವ ಕನವರಿಕೆಗೆ ಜಾರುತ್ತಿರುವಂತೆ ಇಬ್ಬರನ್ನು ಹೊಡೆದು ಕೊಂದು ಪರಾರಿಯಾಗಿರುವುದನ್ನು ಅಪರಾಧ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದರು.ದಂಪತಿಗಳ ಎಳೆ ಹರೆಯದ ಮೂವರು ಮಕ್ಕಳು ಸುದ್ದಿಯಾದರು.
ಕೊಲೆಯಾದ ನಂತರ ಮನೆಯಲ್ಲಿ ಪತ್ತೆಯಾದ ಹುಂಜಕೋಳಿ, ಹಣ ಮತ್ತು ಚಿನ್ನವನ್ನು ಪೊಲೀಸರು ಪೊಲೀಸ್ ಠಾಣೆಯಲ್ಲಿ ಸಾಕ್ಷ್ಯವಾಗಿ ತೆಗೆದುಕೊಂಡರು. ಆ ಕಾಲದಲ್ಲಿ ಪಾಪದ ಹುಂಜ ಭಾರೀ ಸುದ್ದಿಯಾಗಿತ್ತು.
ಆದರೆ ಇಂದು....ಶತಮಾನದ, ವಿಜ್ಞಾನದ ನಾಗಾಲೋಟದಲ್ಲಿ ನಮ್ಮಿದಿರು ಇನ್ನೂ ಅಲ್ಲಲ್ಲಿ ನರ್ತಿಸುವ ಇಂತಹ ಕೆಲವು ಪ್ರಕರಣಗಳು, ಹುಂಬ ಮನುಷ್ಯನ ಆಂತರಂಗಿಕ ರಾಕ್ಷಸೀಯತೆ, ವಂಚನಾ ಮನೋಸ್ಥಿತಿ, ಹೇಗಾದರೂ ಗಳಿಸಬೇಕೆಂಬ ಚಪಲ ಅಚ್ಚರಿ, ಕ್ರೋಧ ಮತ್ತು ಹೇಳಲಾರದ; ಬಾರದ ಯಾವುದೋ ಭಾವತೀವ್ರತೆಯನ್ನು ತಂದೊಡ್ಡುತ್ತದೆ.