ಕಾಸರಗೋಡು: ಸನ್ಯಾಸ ಅತ್ಯಂತ ಶ್ರೇಷ್ಠವಾಗಿದ್ದು, ಎಡನೀರು ಮಠದ ಮೂಲಕ ಈ ಪರಂಪರೆಗೆ ಹೆಚ್ಚಿನ ಮೌಲ್ಯ ಪ್ರಾಪ್ತಿಯಾಗಿದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ತಿಳಿಸಿದ್ದಾರೆ.
ಅವರು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಪೀಠಾರೋಹಣದ ಎರಡನೇ ವರ್ಷಾಚರಣೆ ಅಂಗವಾಗಿ ಶ್ರೀ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಎಡನೀರು ಮತ್ತು ಕಾಣಿಯೂರು ಮಠಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಸಾಮಾಜಿಕ ಚಿಂತನೆ, ಭಾರತದ ನ್ಯಾಯಪೀಠಕ್ಕೆ ಅವರ ಕೊಡುಗೆ, ಕಲಾ-ಸಾಂಸ್ಕøತಿಕ ಚಟುವಟಿಕೆಗಳು ಸಮಾಜಕ್ಕೆ ಮಾದರಿಯಾಗಿದ್ದು, ಇವರ ಹಾದಿಯಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮುಂದುವರಿಯುತ್ತಿರುವುದು ಸಂತಸದಾಯಕ ಎಂದು ತಿಳಿಸಿದರು.
ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಡನೀರು ಮಠ ಕಲೆ, ಸಂಸ್ಕøತಿಯ ಪೋಷಣೆಯ ಜತೆಗೆ ಹಸಿದು ಬರುವವರಿಗೆ ಅಶನ ನೀಡುವ ತಾಣವಾಗಿದೆ. ಶ್ರೀ ಮಠದ ಪರಂಪರೆಯನ್ನು ಶ್ರೇಷ್ಠತೆಯೆಡೆಗೆ ಕೊಂಡೊಯ್ದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಆದರ್ಶ ಮೈಗೂಡಿಸಿಕೊಂಡಿರುವ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರ ಮೂಲಕ ಶ್ರೀ ಮಠ ಮತ್ತಷ್ಟು ಅಭಿವೃದ್ಧಿ ಕಾಣುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭ ಹಿರಿಯ ಸಂಗೀತ ಮತ್ತು ಮೃದಂಗ ವಿದ್ವಾನ್ ಕೆ. ಬಾಬು ರೈ ಅವರನ್ನು ಸನ್ಮಾನಿಸಲಾಯಿತು. ಕಯ್ಯೂರು ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಸೂರ್ಯ ಭಟ್ ಎಡನೀರು ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಕಿಶೋರ್ ಪೆರ್ಲ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ, ಹವನ ಪೂರ್ಣಾಹುತಿ, ಮಹಾಪೂಜೆ ನೆರವೇರಿತು.
ಸನ್ಯಾಸ ಅತ್ಯಂತ ಶ್ರೇಷ್ಠ ಪರಂಪರೆ: ಉಡುಪಿ ಕಾಣಿಯೂರುಶ್ರೀ ಅಭಿಪ್ರಾಯ: ಎಡನೀರು ಶ್ರೀಗಳ ಪೀಠಾರೋಹಣದ ಎರಡನೇ ವರ್ಷಾಚರಣೆ ಕಾರ್ಯಕ್ರಮ
0
October 09, 2022
Tags