ಬದಿಯಡ್ಕ: ಕಲೋತ್ಸವ ಎಂದರೆ ರಾಜ್ಯವೇ ಹೆಮ್ಮೆ ಪಡುವ ವಿಚಾರವಾಗಿದೆ. ಪ್ರತಿಯೋರ್ವ ವಿದ್ಯಾರ್ಥಿಯಲ್ಲಿಯೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಸುಪ್ತವಾದ ಪ್ರತಿಭೆÉಯನ್ನು ಹೊರಗೆಡಹುವಲ್ಲಿ ಕಲೋತ್ಸವಕ್ಕೆ ಪ್ರಾಧಾನ್ಯತೆ ಇದೆ. ಕಾಸರಗೋಡು ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಕ್ಷೇತ್ರಕ್ಕೆ ಅಗಲ್ಪಾಡಿ ಶಾಲೆಯು ಅತಿದೊಡ್ಡ ಕೊಡುಗೆಯನ್ನು ನೀಡಿದೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು.
ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೋಮವಾರ ಸಂಜೆ ಜರಗಿದ 61ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವವಿಲ್ಲದ ಅಕ್ಷರಕ್ಕೆ ಜೀವವನ್ನು ನೀಡುವುದೇ ವಿದ್ಯಾಭ್ಯಾಸ. ಪೂರ್ವಿಕರು ಕಷ್ಟಪಟ್ಟ ಕಟ್ಟಿದ ಶಾಲೆಯು ಇಂದು ಅನೇಕರ ಜೀವನಕ್ಕೇ ಬೆಳಕನ್ನು ನೀಡಿದೆ. ಅವಕಾಶಗಳು ವಿದ್ಯಾರ್ಥಿಗಳಿಗೆ ಲಭಿಸಬೇಕು. ಎಲ್ಲರೂ ಒಂದೇಬಾರಿಗೆ ವಿಜಯಿಯಾಗಲು ಸಾಧ್ಯವಿಲ್ಲ. ಪ್ರಬಲ ಸ್ಪರ್ಧೆಯನ್ನು ನೀಡುವುದು ಮುಖ್ಯ ಎಂದರು.
ಕುಂಬ್ಡಾಜೆ ಗ್ರಾಮಪಂಚಾಯಿತಿ ಅಧ್ಯಕ್ಷ ಹಮೀದ್ ಪೊಸೊಳಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ ಶಾಲಾ ಹಳೆವಿದ್ಯಾರ್ಥಿ, ಗಾನಪ್ರವೀಣ ಯೋಗೀಶ ಶರ್ಮ ಬಳ್ಳಪದವು, ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ವಿನೋದ್, ಮಾತನಾಡಿದರು. ಕಾರಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೆ., ಪುತ್ತಿಗೆ ಗ್ರಾಮಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ, ಜನಪ್ರತಿನಿಧಿಗಳಾದ ಎಲಿಜಬೆತ್ ಕ್ರಾಸ್ತಾ ಹಾಗೂ ಎಂ.ಶೈಲಜಾ ಭಟ್, ನಂದಿಕೇಶನ್, ಶಶಿ ಪಿ.ವಿ., ರಾಮನಾಥ್ ಕೆ., ಎಂ.ಸಂಜೀವ ಶೆಟ್ಟಿ, ಅಬ್ದುಲ್ ರಸಾಕ್ ಟಿ.ಎಂ., ಖದೀಜಾ, ನಳಿನಿ, ಹರೀಶ್ ಗೋಸಾಡ, ಸುಂದರ ಮವ್ವಾರು, ಮೀನಾಕ್ಷಿ, ಆಯಿಶತ್ ಮಸಿದಾ ಪಿ., ವಿಷ್ಣುಪಾಲ್ ಎಚ್.ಎಂ., ರಮೇಶ್ ಕೃಷ್ಣ ಪದ್ಮಾರು, ರವಿಕಾಂತ ಕೇಸರಿ ಕಡಾರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಕೋರಿದರು. ಕಲೋತ್ಸವದ ಲೋಗೋ ವಿನ್ಯಾಸಗೊಳಿಸಿದ ಯೋಗೀಶ್ ಕಡಂದೇಲು ಅವರನ್ನು ಈ ಸಂದಭರ್Àದಲ್ಲಿ ಶಾಲು ಹೊದೆಸಿ ಗೌರವಿಸಲಾಯಿತು.
ಅಭ್ಯಾಗತರ ಅಪೇಕ್ಷೆಯಂತೆ ವೇದಿಕೆಯಲ್ಲಿ ಪ್ರಸಿದ್ಧ ಮಲಯಾಳ ಗೀತೆ ‘ಸಂಗೀತಮೇ ಅಮರ ಸಲ್ಲಾಪಮೇ’ ಗಾನವನ್ನು ಹಾಡಿ ಸಂಚಲನವನ್ನು ಸೃಷ್ಟಿಸಿದ ಗಾನಪ್ರವೀಣ ಯೋಗೀಶ್ ಶರ್ಮ ನೇತೃತ್ವದಲ್ಲಿ ಶಾಲಾ ಶಿಕ್ಷಕ ವೃಂದದವರು ಜೊತೆಯಲ್ಲಿ ಹಾಡಿದ ಸ್ವಾಗತ ಗೀತೆ ಗಮನಸೆಳೆಯಿತು.