ಪೆರ್ಲ: ಕಾರಣಿಕ ದೈವ ಕೊರಗಜ್ಜ ಒಂದಲ್ಲ ಒಂದು ಪವಾಡಕ್ಕೆ ಸಾಕ್ಷಿಯಾಗುತ್ತಲೇ ಬಂದಿದ್ದು, ಎಣ್ಮಕಜೆ ಪಂಚಾಯಿತಿಯ ಕಜಂಪಾಡಿಯಲ್ಲಿ ಕೊರಗಜ್ಜನ ಕಟ್ಟೆಯ ಕಲ್ಲಿನಲ್ಲಿ ತ್ರಿಶೂಲದ ಆಕೃತಿ ಗೋಚರಿಸಿರುವುದು ಕೌತುಕಕ್ಕೆ ಕಾರಣವಾಗಿದೆ.
ಪೆರ್ಲದಿಂದ ಸುಮಾರು ಆರು ಕಿ.ಮೀ ದೂರದ ಕಜಂಪಾಡಿಯಲ್ಲಿ ಈ ಪವಾಡ ಕಂಡುಬಂದಿದೆ. ಇಲ್ಲಿನ ನಿವಾಸಿ ಶಂಕರ ಕಜಂಪಾಡಿ ಅವರು ಶ್ರೀ ಭದ್ರಕಾಳಿ ಹಾಗೂ ಉಪದೈವಗಳ ಆರಾಧಕರಾಗಿದ್ದು, ಕಳೆದ ನಾಲ್ಕು ದಶಕಗಳಿಗೂ ಹೆಚ್ಚುಕಾಲದಿಂದ ಕೊರಗಜ್ಜನ ಆರಾಧನೆಯನ್ನೂ ನಡೆಸಿಕೊಂಡು ಬರುತ್ತಿದ್ದಾರೆ. ಭದ್ರಕಾಳಿ, ಆಲಂಗೋಡು ಧೂಮಾವತೀ, ಗುಳಿಗ, ನಾಗ ದೈವದ ಸನ್ನಿಧಿಯಿರುವ ಪವಿತ್ರ ತಾಣದಲ್ಲಿ ಕೊರಗಜ್ಜನ ಆರಾಧನೆಯೂ ನಡೆದುಬರುತ್ತಿದೆ. ಸಂಕ್ರಮಣ ಕಾಲಕ್ಕೆ ವಿಶೇಷ ಕಲಶ ಜತೆಗೆ ಉಳಿದ ದಿವಸಗಳಲ್ಲೂ ಪ್ರಾರ್ಥನೆಯೊಂದಿಗೆ ಕಲಶಸೇವೆ ಸಡೆಯುತ್ತಿದೆ. ವಾರದ ಹಿಂದೆ ಕಟ್ಟೆಯಲ್ಲಿನ ಹೂವು, ತುಳಸಿ ಸೇರಿದಂತೆ ಪೂಜಾ ದ್ರವ್ಯಗಳನ್ನು ತೆರವುಗೊಳಿಸಿ ಶುಚೀಕರಣ ನಡೆಸುವ ಮಧ್ಯೆ ಕಲ್ಲಿನಲ್ಲಿ ವಿಚಿತ್ರ ಆಕೃತಿ ಕಾಣಿಸಿದೆ. ಕಲ್ಲನ್ನು ನೀರಿನಿಂದ ತೊಳೆದು ನೋಡಿದಾಗ ಈ ಆಕೃತಿ ಮತ್ತಷ್ಟು ಸ್ಪಷ್ಟವಾಗಿ ಗೋಚರಿಸಿದೆ. ನುಣುಪಾದ ಕಲ್ಲನ್ನು ಕಟ್ಟೆಯಲ್ಲಿ ಅಳವಡಿಸಲಾಗಿದ್ದು, ಹಲವು ವರ್ಷಗಳಿಂದ ಪೂಜೆ ಸಲ್ಲಿಸುತ್ತಾ ಬರಲಾಗಿದೆ. ಏಕಾಏಕಿ ಕಲ್ಲಿನಲ್ಲಿ ತ್ರಿಶೂಲದ ಆಕೃತಿ ಮೂಡಿಬಂದಿರುವುದು ಭಕ್ತಾದಿಗಳಲ್ಲಿ ಭಯದ ಜತೆಗೆ ಭಕ್ತಿಯನ್ನೂ ಹೆಚ್ಚಿಸಿರುವುದಾಗಿ ಧರ್ಮದರ್ಶಿ ಶಂಕರ ಕಜಂಪಾಡಿ ತಿಳಿಸುತ್ತಾರೆ. ಈಗಾಗಲೇ ಕೊರಗಜ್ಜನ ಕಟ್ಟೆಯ ಕಲ್ಲಿನಲ್ಲಿ ತ್ರಿಶೂಲದ ಆಕೃತಿಯನ್ನು ನೋಡಲು ಜನರೂ ಆಗಮಿಸಲಾರಂಭಿಸಿದ್ದಾರೆ.